ಪ್ರಸಾರ ಭಾರತಿಯು ರಾಜ್ಯದ ಪ್ರಾದೇಶಿಕ ಆಕಾಶವಾಣಿ ಕೇಂದ್ರಗಳಿಂದ ಬಿತ್ತರವಾಗುತ್ತಿರುವ ಕಾರ್ಯಕ್ರಮಗಳಿಗೆ ಕತ್ತರಿ ಹಾಕಿ, ರಾಜ್ಯದಾದ್ಯಂತ ಏಕರೂಪದ ಸೇವೆ ಒದಗಿಸಲು ಚಿಂತನೆ ನಡೆಸಿರುವುದು (ಪ್ರ.ವಾ., ಡಿ. 17) ಶ್ರೋತೃಗಳನ್ನು ಚಿಂತೆಗೀಡು ಮಾಡಿದೆ. ಇಂದು ಮನರಂಜನೆಗೆ ಮತ್ತು ಮಾಹಿತಿಗೆ ಅನೇಕ ಸಂವಹನ ಕೊಂಡಿಗಳಿವೆ. ಆದರೆ ಅಂದಿನ ಕಾಲದಿಂದಲೂ ಆಕಾಶವಾಣಿಯಿಂದ ಸುದ್ದಿ, ಸಮಾಚಾರ, ಜ್ಞಾನ-ವಿಜ್ಞಾನ, ಕೃಷಿರಂಗ, ವಾರ್ತೆಗಳು, ಜನಪದ, ಸೋಬಾನೆ ಪದಗಳು, ರೇಡಿಯೊ ನಾಟಕ, ಸಂಗೀತ, ಮೆಚ್ಚಿನ ಚಿತ್ರಗೀತೆಗಳು, ಭಾವಗೀತೆ ಎಲ್ಲವನ್ನೂ ಕೇಳುತ್ತಾ ಬಂದಿದ್ದೇವೆ.
ಆಕಾಶವಾಣಿ ತನ್ನ ಪ್ರಸಾರದಲ್ಲಿ ಸ್ಥಳೀಯ ಸುದ್ದಿ ಸಮಾಚಾರಗಳಿಗೆ ಒತ್ತು ಕೊಡುತ್ತಿದೆ. ಜನಪದ ಕಲಾವಿದರನ್ನು ಕರೆಸಿ ಸ್ಥಳೀಯ ಸೊಗಡಿನ ಹಾಡುಗಳನ್ನು ಪ್ರಸಾರ ಮಾಡುತ್ತಿದೆ. ಹೀಗೆ ನಮ್ಮ ಸಂಪರ್ಕ ಕೊಂಡಿಯಾಗಿರುವ ಆಕಾಶವಾಣಿಯಲ್ಲಿ ಏಕರೂಪದ ಸೇವೆಯಿಂದ ಸ್ಥಳೀಯ ಸೊಗಡು ಕಡಿಮೆಯಾಗುತ್ತದೆ. ಆದ್ದರಿಂದ ಪ್ರಸಾರ ಭಾರತಿ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದು ಒಳ್ಳೆಯದು.
-ಎಂ.ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.