‘ಕಾಡಿನಲ್ಲಿ ಹುಲಿ ಸತ್ತರೆ ನಾಡಿಗೆ ಬರ ಬರುತ್ತದೆ’ ಎಂಬುದು ನಮ್ಮ ಪೂರ್ವಿಕರ ಬಲವಾದ ನಂಬಿಕೆಯಾಗಿತ್ತು. ಪರಿಸರ ವ್ಯವಸ್ಥೆಯ ಕೊಂಡಿಗಳು ಹೇಗೆ ಪರಸ್ಪರ ಬಿಗಿದುಕೊಂಡು ಸಮತೋಲನ ಕಾಯ್ದುಕೊಳ್ಳುತ್ತವೆ ಎಂಬುದನ್ನು ಅವರು ಸೂಕ್ಷ್ಮವಾಗಿ ಅರಿತಿದ್ದರು. ಆದ್ದರಿಂದ ಅವರು ಪ್ರಕೃತಿಗೆ ಸಾಧ್ಯವಾದಷ್ಟು ಸಮೀಪದಲ್ಲಿ, ಪರಿಸರಕ್ಕೆ ಪೂರಕವಾಗಿ ಬದುಕನ್ನು ನಡೆಸಿದ್ದರು. ಆದರೆ ಪ್ರಸ್ತುತ ಪರಿಸ್ಥಿತಿಯು ಅದಕ್ಕೆ ವಿರುದ್ಧವಾಗಿದೆ.
ಆಳುವ ವರ್ಗಗಳು ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಮಾಡುವುದರ ಫಲವಾಗಿ ಪ್ರಕೃತಿಯ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಮೊದಲಿನ ಸಮತೋಲನ ಸ್ಥಿತಿಗೆ ಬರಲು ಪ್ರಕೃತಿ ನಡೆಸುವ ಸರ್ಕಸ್ಸುಗಳೇ ಅತಿವೃಷ್ಟಿ, ಅನಾವೃಷ್ಟಿ ಮುಂತಾದವು. ಇಲ್ಲಿ ಇನ್ನೊಂದು ವಿಚಿತ್ರವೆಂದರೆ, ನೈಸರ್ಗಿಕ ವಿಕೋಪಗಳಿಗೆ ತುತ್ತಾಗಿ ಆಸ್ತಿ ಪಾಸ್ತಿ ನಾಶವಾದವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ! ಅಂದರೆ, ಒಂದು ಕಡೆ ಪರಿಸರ ನಾಶಕ್ಕೆ ಅಂಕಿತ ಹಾಕಿ, ಅದರಿಂದ ಜನರಿಗೆ ತೊಂದರೆ ಎದುರಾದಾಗ ಸರ್ಕಾರವೇ ಮತ್ತೆ ಪರಿಹಾರ ನೀಡಲು ಮುಂದಾಗುತ್ತದೆ. ತೊಟ್ಟಿಲು ತೂಗುವವರೂ ಅವರೇ, ಮಗುವನ್ನು ಚಿವುಟುವವರೂ ಅವರೇ!
ಈ ಮೊದಲೇ ಸರ್ಕಾರಗಳು ಎಚ್ಚೆತ್ತುಕೊಂಡು ಅರಣ್ಯ ನಾಶವನ್ನು ತಡೆದಿದ್ದರೆ ಕೋಟ್ಯಂತರ ರೂಪಾಯಿ ಪರಿಹಾರ ನೀಡುವುದು ತಪ್ಪುತ್ತಿತ್ತು. ಸರ್ಕಾರದ ಅವೈಜ್ಞಾನಿಕ ಯೋಜನೆಗಳ ವಿರುದ್ಧ ದನಿ ಎತ್ತುವುದು ಸಾರ್ವಜನಿಕರ ಕರ್ತವ್ಯ ಸಹ ಆಗಿರುತ್ತದೆ.
-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.