ಪ್ರವಾಸಿಗರ ಮೋಜು-ಮಸ್ತಿಯಿಂದ ಅಂಟಾರ್ಕ್ಟಿಕಾ ಖಂಡದ ಪೆಂಗ್ವಿನ್ಗಳು ತೊಂದರೆ ಅನುಭವಿಸುತ್ತಿವೆ ಎಂಬ ವರದಿ ಓದಿ (ಪ್ರ.ವಾ., ನ. 30) ವಿಷಾದವೆನಿಸಿತು. ಇದು ಕೇವಲ ಒಂದು ಪ್ರದೇಶದಲ್ಲಿ ವಾಸಿಸುತ್ತಿರುವ ಜೀವಿಗಳ ಸಮಸ್ಯೆ ಅಲ್ಲ, ಪ್ರಪಂಚದ ಎಲ್ಲಾ ಭೂಭಾಗಗಳಲ್ಲೂ ಬಹುತೇಕ ಎಲ್ಲಾ ಜೀವಿಗಳೂ ಅನುಭವಿಸುತ್ತಿರುವ ಸಮಸ್ಯೆ. ಇದಕ್ಕೆ ಕಾರಣ, ಮನುಷ್ಯನ ವ್ಯಾವಹಾರಿಕ ಬುದ್ಧಿ. ಯಾವುದೇ ಪ್ರದೇಶದ ಯಾವುದೇ ಸರ್ಕಾರವಿರಲಿ ಅದು ಬಯಸುವುದು ವರಮಾನವನ್ನು ಮಾತ್ರ. ಯಾವುದೇ ಮೂಲದಿಂದಲಾದರೂ ಸರಿಯೇ ಒಟ್ಟಿನಲ್ಲಿ ಸರ್ಕಾರಕ್ಕೆ ವರಮಾನ ಬಂದರೆ ಸಾಕೆಂಬ ದುರ್ಬುದ್ಧಿಯೇ ಇಂತಹ ಅವಘಡಗಳಿಗೆ ಕಾರಣ.
ಪರಿಸರಸೂಕ್ಷ್ಮ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶ ನೀಡುವುದೇ ತಪ್ಪು. ಬಹುತೇಕಪ್ರವಾಸಿಗರು ಫೋಟೊ ತೆಗೆದುಕೊಳ್ಳುವ ಭರದಲ್ಲಿ ಅಲ್ಲಿನ ಜೀವಿಗಳ ವೈಯಕ್ತಿಕ ಬದುಕನ್ನೇ ಕಸಿದುಕೊಳ್ಳುತ್ತಾರೆ. ಇದಲ್ಲದೆ ತಮ್ಮೊಂದಿಗೆ ತೆಗೆದುಕೊಂಡು ಹೋದ ಆಹಾರ ಪದಾರ್ಥಗಳನ್ನುಅಲ್ಲಿಯೇ ಬಿಸಾಡುವುದರಿಂದ ಅಲ್ಲಿನ ಜೀವಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅಧ್ಯಯನದ ಹೆಸರಿನಲ್ಲಿ, ಪರಿಸರಪ್ರೇಮದ ಸೋಗಿನಲ್ಲಿ ಬಹುತೇಕರು ಉತ್ತಮ ಕ್ಲಿಕ್ಗಾಗಿ ಪ್ರಾಣಿ-ಪಕ್ಷಿಗಳಿಗೆ ತೊಂದರೆ ಕೊಡುವುದನ್ನು ನೋಡಿರುತ್ತೇವೆ. ಇಂತಹ ಕಾರಣಗಳಿಂದಾಗಿ, ಪರಿಸರಸೂಕ್ಷ್ಮ ಪ್ರದೇಶಗಳಲ್ಲಿಪ್ರವಾಸೋದ್ಯಮವನ್ನು ನಿಷೇಧಿಸಿ, ಮಾನವ ನಿರ್ಬಂಧಿತ ಪ್ರದೇಶವೆಂದು ಘೋಷಣೆ ಮಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.