ADVERTISEMENT

ದಂಡದ ಹಣ ಸರ್ಕಾರದ ಬೊಕ್ಕಸಕ್ಕೇ ಸೇರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 3 ಜುಲೈ 2019, 18:30 IST
Last Updated 3 ಜುಲೈ 2019, 18:30 IST

ಸಂಚಾರ ನಿಯಮ ಉಲ್ಲಂಘಿಸುವವರಿಗೆ ಭಾರಿ ಮೊತ್ತದ ದಂಡ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರಸ್ತೆ ಸುರಕ್ಷತೆಯ ದೃಷ್ಟಿಯಿಂದ, ದಂಡದ ಮೊತ್ತ ಹೆಚ್ಚಿಸಿರುವ ಕ್ರಮ ಶ್ಲಾಘನೀಯ. ಆದರೆ ದಂಡದ ಹಣ ಸರ್ಕಾರದ ತಿಜೋರಿಗೇ ಸೇರುವಂತೆ ನೋಡಿಕೊಳ್ಳುವುದು ಕಷ್ಟದ ಕೆಲಸ.

ಸಂಚಾರ ನಿಯಮ ಉಲ್ಲಂಘಿಸಿದ ಸವಾರರನ್ನು ಪೊಲೀಸರು ಹಿಡಿದು ದಂಡ ಹಾಕಲುಮುಂದಾದಾಗ ಎಷ್ಟೋ ಬಾರಿ ಸವಾರರು ₹ 1 ಸಾವಿರದ ದಂಡಕ್ಕೆ ₹ 100, ₹ 200 ಕೊಡುತ್ತಾರೆ. ಈ ಮೂಲಕ ರಸೀದಿ ಪಡೆಯದೆ ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಾರೆ. ಕೆಲ ಭ್ರಷ್ಟ ಪೊಲೀಸರು ಸಹ ಹಣದ ಆಸೆಯಿಂದ, ನಿಯಮದ ಪ್ರಕಾರ ದಂಡದ ಹಣ ವಸೂಲು ಮಾಡದೆ ಕಡಿಮೆ ಮೊತ್ತದ ಹಣ ಪಡೆದು ರಸೀದಿ ಕೊಡದೆ ಅವರನ್ನು ಬಿಟ್ಟು ಕಳುಹಿಸಿ ತಮ್ಮ ಜೇಬನ್ನು ತುಂಬಿಸಿಕೊಳ್ಳುತ್ತಾರೆ. ಇದರಿಂದ ದಂಡದ ಎಷ್ಟೋ ಪಾಲು ಸರ್ಕಾರದ ಬೊಕ್ಕಸ ಸೇರುವುದೇ ಇಲ್ಲ.

ನಿಯಮ ಉಲ್ಲಂಘಿಸಿದವರ ಬಳಿ ಆ ತಕ್ಷಣಕ್ಕೆ ನಿಗದಿತ ದಂಡ ಪಾವತಿಸುವಷ್ಟು ಹಣ ಇಲ್ಲದಿದ್ದರೆ, ಅವರ ಬಳಿ ಎಷ್ಟಿರುತ್ತದೋ ಅಷ್ಟನ್ನು ಕಟ್ಟಿಸಿಕೊಂಡು, ಬಾಕಿ ಮೊತ್ತ ಪಾವತಿಗೆ ಸಮಯಾವಕಾಶ ನೀಡಬೇಕು. ಅದನ್ನು ಕೋರ್ಟ್, ಬೆಂಗಳೂರು ಒನ್ ಅಥವಾ ಆನ್‌ಲೈನ್‌ನಲ್ಲಿ ಪಾವತಿಸಲು ಅನುವು ಮಾಡಿಕೊಡಬೇಕು. ಇದರಿಂದ ಸಂಚಾರ ನಿಯಮ ಉಲ್ಲಂಘಿಸಿದ ತಪ್ಪಿಗೆ ದಂಡ ಪಾವತಿಸಿದಂತೆಯೂ ಆಗುತ್ತದೆ, ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ ಮತ್ತು ಸರ್ಕಾರಕ್ಕೂ ಹೆಚ್ಚಿನ ಆದಾಯ ಬರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.