ಬಾಲಿವುಡ್ ನಟ ಅಜಯ್ ದೇವಗನ್ ಅವರು ಹಿಂದಿಯನ್ನು ರಾಷ್ಟ್ರಭಾಷೆ ಎಂದಿದ್ದಕ್ಕೆ ಪ್ರತಿಯಾಗಿ ಕರ್ನಾಟಕದವರಾದ ನಟ ಸುದೀಪ್ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಉತ್ತರ ಭಾರತೀಯರಾದ ಅಜಯ್ ದೇವಗನ್ ಹಿಂದಿ ಪರ ವಕಾಲತ್ತು ವಹಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ಆದರೆ ದಕ್ಷಿಣದವರೇ ಅನೇಕರು ಹಿಂದಿಯನ್ನು ರಾಷ್ಟ್ರಭಾಷೆಯೆಂದು ಹೇಳಿಕೊಂಡು ಬರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅಜಯ್ ದೇವಗನ್ ವ್ಯವಸ್ಥೆಯ ಶಿಶು. ಅದು ಕಲಿಸಿದಂತೆ ಅವರು ಮಾತನಾಡಿದ್ದಾರೆ. ಅವರ ಕಲಿಕೆ ಕೇವಲ ಅವರಿಗಷ್ಟೇ ಸೀಮಿತವಾಗಿರದೆ, ಹಿಂದಿ ರಾಷ್ಟ್ರಭಾಷೆ ಎಂಬ ಭಾವನೆ ಇಡೀ ದೇಶದಲ್ಲಿ ಹಬ್ಬಿದೆ. ಇದಕ್ಕೆ ಕಾರಣ, ಹಿಂದಿನಿಂದಲೂ ಆಳ್ವಿಕೆ ನಡೆಸಿದ ಸರ್ಕಾರಗಳು ಹಿಂದಿಯನ್ನು ಆ ರೀತಿ ಬಿಂಬಿಸುತ್ತಾ ಬಂದಿರುವುದು.
ಭಾಷೆ ಆಧಾರದ ಮೇಲೆ ರಾಜ್ಯಗಳು ವಿಂಗಡಣೆಯಾದ ಮೇಲೆ ಕನ್ನಡ ಭಾಷೆಯು ರಾಜ್ಯ ಭಾಷೆಯಾಗಿ ಗಟ್ಟಿಯಾಗಿ ಬೇರೂರಿಲ್ಲ. 80ರ ದಶಕದಲ್ಲಿ ನಾವು ಪ್ರಾದೇಶಿಕ ವೈವಿಧ್ಯದ ಹಿನ್ನೆಲೆಯಲ್ಲಿ ಸರ್ಕಾರಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಚಿತ್ರಹಾರ್, ಚಿತ್ರಮಂಜರಿ ನೋಡುತ್ತಾ ಬೆಳೆದೆವು. ಕನ್ನಡದ ರಾಜ್ಕುಮಾರ್, ವಿಷ್ಣುವರ್ಧನ್ ಅವರಂತೆ ಹಿಂದಿಯ ಅಮಿತಾಭ್ ಬಚ್ಚನ್, ಧರ್ಮೇಂದ್ರ ಅಂತಹ ನಟರು ನಮ್ಮ ಮನಸ್ಸಿನಾಳಕ್ಕೆ ಇಳಿದರು. ಈ ರೀತಿಯ ಮನರಂಜನೆಯ ಜಗತ್ತು ಭಾಷೆಯ ಗಡಿಯನ್ನು ದಾಟಿ ತನ್ನ ನೆಲೆ ವಿಸ್ತರಿಸಿಕೊಂಡಿದೆ. ಹಿಂದಿಯನ್ನು ನಾವೀಗ ರಾಷ್ಟ್ರಭಾಷೆಯಾಗಿ ನಿರಾಕರಿಸಬಹುದು. ಆದರೆ ದೇಶವ್ಯಾಪಿ ಸಂಪರ್ಕಭಾಷೆಯಾಗಿ ನಿರಾಕರಿಸಲು ಸಾಧ್ಯವಿಲ್ಲ. ಏಕೆಂದರೆ ಆ ಬೇರುಗಳು ಈಗಾಗಲೇ ಭೂಮಿಯ ತಳದಾಳಕ್ಕೆ ಇಳಿದುಬಿಟ್ಟಿವೆ.
ಆರ್.ವೆಂಕಟರಾಜು,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.