ಮಹಾರಾಷ್ಟ್ರದಲ್ಲಿ ಮರಾಠಿ ಮಕ್ಕಳಿಗೆ ಕನ್ನಡ ಕಲಿಸಿದ ಶಿಕ್ಷಕರೊಬ್ಬರಿಗೆ ಜಾಗತಿಕ ಪ್ರಶಸ್ತಿ ದೊರೆತಿದೆ. ಅದೇ ರೀತಿ ಕರ್ನಾಟಕದ ಉರ್ದು ಸರ್ಕಾರಿ ಶಾಲೆಗಳಲ್ಲಿ, ಉರ್ದು ಮನೆಮಾತಾಗಿರುವ ಮಕ್ಕಳಿಗೆ ದಶಕಗಳಿಂದಲೂ ಕನ್ನಡ ಕಲಿಸುತ್ತಿರುವ ಶಿಕ್ಷಕರು, ತಾವು ಉರ್ದು ಮಾತೃಭಾಷೆಯನ್ನು ಮಕ್ಕಳೊಂದಿಗೆ ಕಲಿತು, ಅವರಿಗೆ ಕನ್ನಡ ಭಾಷೆಯನ್ನು ಕಲಿಸುತ್ತಾರೆ. ಯಾರಾದರೂ ಉತ್ತರ ಕರ್ನಾಟಕದ ಯಾವುದೇ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರೂ ಆ ಮಕ್ಕಳಿಗೆ ಕನ್ನಡ ಕಲಿಸುವುದು ಅತ್ಯಂತ ಕಷ್ಟಕರವಾದ ಕೆಲಸ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಇದನ್ನು ಗಮನಿಸುವ ಕೆಲಸ ಆಗಬೇಕಿದೆ.
ಅದು ಶಿಕ್ಷಕರ ಕರ್ತವ್ಯ ಎಂದು ಕೆಲವರು ಹೇಳಬಹುದು. ಆದರೆ ಇಲ್ಲಿ ಕಲಿಸಬೇಕಾದ ಮಕ್ಕಳು ಕನ್ನಡ ಭಾಷೆಯ ಒಂದು ಅಕ್ಷರವನ್ನೂ ಕಲಿಯದೆ ಬರುವಂತಹವರು. ಅಂತಹ ಮಕ್ಕಳಿಗೆ ಕನ್ನಡ ಕಲಿಸುವುದು ತುಂಬಾ ಸವಾಲಿನ ಕೆಲಸವಾಗಿರುತ್ತದೆ.
ನಾನು ಅಜೀಂ ಪ್ರೇಮ್ಜಿ ಪ್ರತಿಷ್ಠಾನದ ಸಂಪನ್ಮೂಲ ವ್ಯಕ್ತಿಯಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಕಾರ್ಯ
ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ಅನೇಕ ಸರ್ಕಾರಿ ಉರ್ದು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಆ ಮಕ್ಕಳಿಗೆ ಕನ್ನಡ ಕಲಿಸುವಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಆ ಸಂದರ್ಭದಲ್ಲಿ ಚರ್ಚಿಸಿದ್ದೇನೆ, ಅವರು ದ್ವಿಭಾಷಿಗಳಾಗಿಕಾರ್ಯನಿರ್ವಹಿಸುವುದನ್ನು ಗಮನಿಸಿದ್ದೇನೆ. ಅವರ ಈ ಕನ್ನಡಮ್ಮನ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
- ಡಾ. ಗುರುಪ್ರಸಾದ ಎಚ್.ಎಸ್.,ಮರಿಯಮ್ಮನ ಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.