‘ಇತಿಹಾಸದಿಂದ ಪಾಠ ಕಲಿಯಲಿಲ್ಲ ಎಂಬುದೇ ಅದರಿಂದ ಕಲಿತ ಪಾಠ’ ಎಂಬ ನಾಣ್ನುಡಿಯು ಕರ್ನಾಟಕದಲ್ಲಿ ನಿಜವಾಗುತ್ತಿರುವಂತೆ ಕಾಣುತ್ತಿದೆ. ರಾಜ್ಯದಲ್ಲಿ 2006ರಿಂದ 2011ರವರೆಗೆ ನಡೆದ ಕಬ್ಬಿಣದ ಅದಿರು ಗಣಿಗಾರಿಕೆ ಅಕ್ರಮಗಳ ಬಗ್ಗೆ, ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ, ಅದರಿಂದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಪರಿಸರಕ್ಕೆ, ಕೃಷಿಗೆ, ಜನರ ಆರೋಗ್ಯಕ್ಕೆ ಉಂಟಾದ ಅಪಾಯಗಳ ಬಗ್ಗೆ ಕರ್ನಾಟಕ ಲೋಕಾಯುಕ್ತರ ವರದಿಯಿದೆ. ಸುಪ್ರೀಂ ಕೋರ್ಟ್ ನೇಮಿಸಿದ್ದ ಸಿ.ಇ.ಸಿ. ವರದಿಯಿದೆ. ಪ್ರಸ್ತುತ ಮುಖ್ಯಮಂತ್ರಿ ಅಂದು ಅದರ ವಿವಾದದಲ್ಲಿ ಸಿಲುಕಿ ರಾಜೀನಾಮೆ ನೀಡಿದ್ದರು.
ಇದೀಗ ಕೆಆರ್ಎಸ್ ಅಣೆಕಟ್ಟೆ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ಕುರಿತ ಕಾಯ್ದೆಗಳ ಉಲ್ಲಂಘನೆ, ಅಣೆಕಟ್ಟೆಗೆ ಅಪಾಯ ಸಾಧ್ಯತೆ, ಗುಡ್ಡಗಳನ್ನು ನೆಲಸಮ ಮಾಡಿರುವುದು, ಗಣಿ ಅಕ್ಕಪಕ್ಕದಲ್ಲಿನ ಹಳ್ಳಿಗರ ಆರೋಗ್ಯದ ಸಮಸ್ಯೆ ಮುಂತಾದವುಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲಿ ನಡೆಯುತ್ತಿರುವ ಗಣಿಗಾರಿಕೆಯು ನಮ್ಮ ಆರ್ಥಿಕತೆಗೆ ಅನಿವಾರ್ಯವೇನಲ್ಲ. ಈ ಬಗ್ಗೆ ಅಲ್ಲಿನ ಗಣಿಗಾರಿಕೆಯನ್ನು ನಿಷೇಧಿಸುವುದೇ ಇದೆಲ್ಲಕ್ಕೂ ಪರಿಹಾರ. ನಮ್ಮ ಸರ್ಕಾರವು ಇತಿಹಾಸದಿಂದ ಪಾಠ ಕಲಿಯುತ್ತದೆ ಎಂದು ಭಾವಿಸಿದ್ದೇನೆ.
-ಟಿ.ಆರ್.ಚಂದ್ರಶೇಖರ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.