ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಯವರು ಹಮ್ಮಿಕೊಂಡಿರುವ ಯಾತ್ರೆಯಲ್ಲಿ ಅವರನ್ನು ಭೇಟಿಯಾದ ರೈತ ಯುವಕನೊಬ್ಬ, ತಮಗೆ ಮದುವೆಯಾಗಲು ಯಾರೂ ಹೆಣ್ಣು ಕೊಡದೆ ಇರುವ ಸಮಸ್ಯೆಯ ಬಗ್ಗೆ ಅಲವತ್ತುಕೊಂಡಿರುವ ಸುದ್ದಿಯನ್ನು ಓದಿ (ಪ್ರ.ವಾ., ನ. 22) ಮನಸ್ಸು ವಿಹ್ವಲಗೊಂಡಿತು. ಇದು ನಮ್ಮ ಸಮಾಜಕ್ಕೆ ಕಾದಿರುವ ಪ್ರಳಯಸದೃಶ ಗಂಡಾಂತರದ ಮುನ್ಸೂಚನೆ. ಮೊದಲೆಲ್ಲ ಈ ಸಮಸ್ಯೆ ಬರೀ ಬ್ರಾಹ್ಮಣ ಸಮುದಾಯದಲ್ಲಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಸಮಸ್ಯೆಯು ಲಿಂಗಾಯತರು, ಒಕ್ಕಲಿಗರು, ಕುರುಬರು, ಈಡಿಗರು ಹೀಗೆ ಎಲ್ಲ ಸಮುದಾಯಗಳಲ್ಲೂ ಬೃಹದಾಕಾರವಾಗಿ ಬೆಳೆದಿದೆ. ಇತ್ತೀಚೆಗೆ ಊರಿಗೆ ಹೋಗಿದ್ದಾಗ ನನಗೆ ಸಿಕ್ಕಿದ ನನ್ನ ದಲಿತ ಸ್ನೇಹಿತನೊಬ್ಬ ತಮ್ಮಲ್ಲೂ ಈ ಸಮಸ್ಯೆ ಶುರುವಾಗಿಬಿಟ್ಟಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ. ಹೆಣ್ಣುಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಆರ್ಥಿಕ ಸ್ವಾತಂತ್ರ್ಯ, ಪಾಶ್ಚಾತ್ಯ ಪ್ರಭಾವ, ಬದಲಾಗುತ್ತಿರುವ ಅಭಿರುಚಿಗಳು, ವಿಭಕ್ತ ಕುಟುಂಬಗಳ ಪರಿಕಲ್ಪನೆ...ಇವೆಲ್ಲವೂ ಇದರ ಹಿಂದಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಸಮಾಜದ ಆಳದಲ್ಲಿ ಕೃಷಿಯ ಬಗ್ಗೆ ಇರುವ ತಾತ್ಸಾರ ಇಲ್ಲಿ ಜೋರಾಗಿ ಕೆಲಸ ಮಾಡುತ್ತಿದೆ. ಕೋಲಾರದ ಯುವಕನ ಅಳಲು ಇಡೀ ಸಮಾಜದ ಸಮಸ್ಯೆಯ ಸಂಕೇತವಾಗಿದೆ.
ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಈ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯವಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಇದಕ್ಕೊಂದು ನೀತಿಯನ್ನೇ ರೂಪಿಸುವುದಾಗಿ ಕುಮಾರಸ್ವಾಮಿ ಅವರು ಹೇಳಿರುವುದು ಕೂಡ ಅಸಂಭವ. ಮನಸ್ಸು ಮಾಡಿದರೆ, ನಾನಾ ಸಮುದಾಯಗಳ ಸ್ವಾಮೀಜಿಗಳು ಊರೂರಿಗೂ ಹೋಗಿ, ಪೋಷಕ ವರ್ಗದಲ್ಲಿ ಜಾಗೃತಿ ಮೂಡಿಸಲು ಸಾಧ್ಯವಿದೆ. ಪ್ರತಿಮೆಗಳ ಸ್ಥಾಪನೆ, ಮೀಸಲಾತಿಗೆ ಒತ್ತಾಯ, ಅಸಂಬದ್ಧ ಸಮಾವೇಶಗಳಲ್ಲೇ ಮುಳುಗಿರುವ ಹೆಚ್ಚಿನ ಸ್ವಾಮೀಜಿಗಳು ಇಡೀ ಸಮಾಜ ಮತ್ತು ಕೃಷಿ ಸಂಸ್ಕೃತಿಯ ಉಳಿವಿನ ಬಗ್ಗೆ ಯೋಚಿಸಬೇಕು. ಕೃಷಿ ಸಂಸ್ಕೃತಿ ಉಳಿಯಬೇಕೆಂದರೆ, ಆ ಕಸುಬನ್ನು ನೆಚ್ಚಿಕೊಂಡಿರುವವರನ್ನು ಸಮಾಜ ಬಗೆಬಗೆಯಲ್ಲಿ ಆತುಕೊಳ್ಳಬೇಕು.
ಬಿ.ಎಸ್.ಜಯಪ್ರಕಾಶ ನಾರಾಯಣ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.