ADVERTISEMENT

ಮತದಾನದಿಂದ ದೂರ ಇರಿಸುವ ಹುನ್ನಾರ

ದಾಸನೂರು ಕೂಸಣ್ಣ
Published 1 ಡಿಸೆಂಬರ್ 2019, 20:32 IST
Last Updated 1 ಡಿಸೆಂಬರ್ 2019, 20:32 IST

ನಮ್ಮ ಸಂವಿಧಾನವು ಜಾತಿ, ಧರ್ಮ, ವಿದ್ಯಾರ್ಹತೆ, ಮತ... ಈ ಯಾವುದನ್ನೂ ಪರಿಗಣಿಸದೆ, ‘ಒಬ್ಬರಿಗೊಂದು ಮತ’ ಎಂಬ ಸಾರ್ವತ್ರಿಕ ನೀತಿ ಸಾರಿದೆ. ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವಾಗ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ನೋಡಿ ಗಾಬರಿಯಾಯಿತು. ಮತದಾನದ ಸಂದರ್ಭದಲ್ಲಿ ಕೆಲವು ಮತಕ್ಷೇತ್ರಗಳಲ್ಲಿ ಮುಸ್ಲಿಮರನ್ನು ಬಲವಂತದಿಂದ ಊರು ಬಿಡಿಸುವ ಹುನ್ನಾರಗಳ ಬಗೆಗಿನ ಆ ವಿಚಾರವು ದಿಗಿಲು
ಹುಟ್ಟಿಸುವಂತಹುದು.

ಮತದಾನ ನಮ್ಮ ಹಕ್ಕು. ಸರಿ ಅನ್ನಿಸಿದ ಯಾರಿಗೆ ಬೇಕಾದರೂ ವೋಟು ಹಾಕುವುದು ಮತದಾರನ ವೈಯಕ್ತಿಕ ನಿರ್ಧಾರ. ಯಾರಲ್ಲೇ ಆಗಲಿ ಅಂಜಿಕೆ ಸೃಷ್ಟಿಸಿ ಮತದಾನ ಮಾಡದಂತೆ ಮಾಡಿದರೆ ಅದರಂತಹ ಹೀನ ರಾಜಕೀಯ ಕೃತ್ಯ ಬೇರೊಂದಿಲ್ಲ. ಈ ಕೃತ್ಯವನ್ನು ಯಾವುದೇ ವ್ಯಕ್ತಿ, ರಾಜಕೀಯ ಪಕ್ಷ ಅಥವಾ ಸಂಘಟನೆ ಮಾಡಿದರೂ ಅಕ್ಷಮ್ಯ. ಕಠಿಣವಾಗಿ ದಂಡಿಸಬೇಕಾದಂತಹ
ಕೃತ್ಯ ಇದು.

ಸೈದ್ಧಾಂತಿಕವಾಗಿ ಹೋರಾಡಿ, ಮನವೊಲಿಸಿ ಗಳಿಸುವ ಮತಗಳ ಮೌಲ್ಯ ಜಾಸ್ತಿ. ಗೆಲ್ಲುವ ಉಮೇದಿನಿಂದ ನಿರ್ದಿಷ್ಟ ಸಮುದಾಯಗಳನ್ನು ನಿಯಂತ್ರಿಸುವ ನೀಚತನಕ್ಕೆ ಇಳಿಯುವುದು ಪ್ರಜಾಮೌಲ್ಯವಲ್ಲ. ಆಮಿಷವೊಡ್ಡಿ ಮತದಾನದ ಗುರುತಿನ ಚೀಟಿಗಳನ್ನು ತಮ್ಮಲ್ಲಿ ಇರಿಸಿಕೊಳ್ಳುವುದು ಅಥವಾ ಮತದಾನಕ್ಕೆ ಮೊದಲೇ ಬೆರಳಿಗೆ ಶಾಯಿ ಬಳಿಯುವಂತಹ ಹುನ್ನಾರಗಳು ಕೂಡ ನಡೆಯುತ್ತವೆ ಎಂಬ ಮಾತಿದೆ. ಮತದಾರನ ಹಕ್ಕನ್ನು ರಕ್ಷಿಸಲು ಚುನಾವಣಾ ಆಯೋಗವು ಕಟಿಬದ್ಧವಾಗಿರಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.