ಒಡಿಶಾದ ಎರಡು ಹಿಂದುಳಿದ ಜಿಲ್ಲೆಗಳಲ್ಲಿ ಅಲ್ಲಿನ ಯುವಚೇತನಗಳು ನಡೆಸಿರುವ ಶಿಕ್ಷಣ ಕ್ರಾಂತಿ ಕುರಿತು ಗುರುರಾಜ್ ಎಸ್. ದಾವಣಗೆರೆ ಅವರು ಬರೆದಿರುವ ಲೇಖನ (ಪ್ರ.ವಾ., ಫೆ. 16) ಸಕಾಲಿಕವಾಗಿದೆ.
ಕೋವಿಡ್ ಸಂದರ್ಭದಲ್ಲಿ ಹೆಚ್ಚು ಹಾನಿಗೆ ಒಳಗಾಗಿರುವ ಶಿಕ್ಷಣ ಕ್ಷೇತ್ರವನ್ನು ಪುನಶ್ಚೇತನಗೊಳಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕೆಲವು ಒಳನೋಟಗಳನ್ನು ನೀಡುತ್ತದೆ. ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ವಿದ್ಯಾಗಮ ಯೋಜನೆಗೂ ಲೇಖಕರು ಪ್ರಸ್ತಾಪಿಸಿರುವ ಒಡಿಶಾದ ಯೋಜನೆಗೂ ಸಾಮ್ಯತೆ ಇದೆ. ಜೊತೆಗೆ ಕಾಲೇಜು ವಿದ್ಯಾರ್ಥಿಗಳನ್ನೇ ಶಿಕ್ಷಕರನ್ನಾಗಿ ಬಳಸಿಕೊಂಡ ಒಡಿಶಾದ ಮಾದರಿ ಒಂದು ಹೊಸ ಪ್ರಯೋಗ ಎನಿಸಿದರೂ ಇದು ಕೂಡ ಕೆಲವು ವರ್ಷಗಳ ಹಿಂದೆ ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಯೋಜನೆಯನ್ನು ಜ್ಞಾಪಿಸುತ್ತದೆ.
ಆ ಯೋಜನೆಯನ್ವಯ ಕಾಲೇಜು ವಿದ್ಯಾರ್ಥಿಗಳು, ನಿವೃತ್ತ ಅಧಿಕಾರಿಗಳು, ನಿವೃತ್ತ ಶಿಕ್ಷಕರು ತಮಗೆ ಹತ್ತಿರವಿರುವ ಶಾಲೆಗೆ ಪ್ರತೀ ಶನಿವಾರ ಹೋಗಿ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಹೇಳಿಕೊಡುವ ಅವಕಾಶ ಕಲ್ಪಿಸಲಾಗಿತ್ತು.
ಈ ಯೋಜನೆಯ ಅಡಿಯಲ್ಲಿ ನಾನು ಒಂದು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ನೈತಿಕ ಮೌಲ್ಯಗಳ ಕುರಿತು ಎರಡು ವರ್ಷ ತರಗತಿ ತೆಗೆದುಕೊಂಡಿದ್ದೆ. ಈ ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇದೇ ಯೋಜನೆಯನ್ನು ಕೆಲವು ಮಾರ್ಪಾಟುಗಳೊಂದಿಗೆ ಜಾರಿಗೆ ತಂದಿದ್ದರೆ, ಹಳ್ಳಿಯ ಮಕ್ಕಳ ಶಿಕ್ಷಣ ಅಡೆತಡೆಯಿಲ್ಲದೆ ಮುಂದುವರಿಯುವ ಎಲ್ಲ ಸಾಧ್ಯತೆಯೂ ಇತ್ತು.
-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.