ADVERTISEMENT

ವಾಚಕರ ವಾಣಿ | ಪ್ರಶಸ್ತಿ ಪುರಸ್ಕೃತ ಕೃತಿಗೆ ಸಿಗಲಿ ಮನ್ನಣೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 19:15 IST
Last Updated 19 ಜನವರಿ 2023, 19:15 IST

’- ಜೈಪುರ ಸಾಹಿತ್ಯೋತ್ಸವ ಆರಂಭದ ಕುರಿತು (ಪ್ರ.ವಾ., ಜ. 19) ಓದಿದೆ. ಅದರಲ್ಲೂ ‘ಠೋಕರಿ ಮೈ ದಿಗಂತ್’ ಹಿಂದಿ ಕವನ ಸಂಕಲನಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಅನಾಮಿಕಾ ಅವರೊಟ್ಟಿಗೆ ಚರ್ಚೆ ಇರುವುದು ನನ್ನ ಗಮನ ಸೆಳೆಯಿತು. 2021ರಲ್ಲಿ ಡಿ.ಎಸ್.ನಾಗಭೂಷಣ ಅವರ ‘ಗಾಂಧಿ ಕಥನ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಯಿತಷ್ಟೇ (ಈ ಪುಸ್ತಕ ಮೂರು ವರ್ಷಗಳಲ್ಲಿ 25 ಮುದ್ರಣ ಕಂಡು 28,000 ಪ್ರತಿಗಳ ಮಾರಾಟವೂ ಆಗಿದೆ).

ಈ ಹೆಗ್ಗಳಿಕೆ ಏನೇ ಇರಲಿ, ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯವಾಗಲಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸ್ಥಳೀಯ ಶಾಖೆಯಾಗಲಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಾಗಲಿ, ಕನ್ನಡ ಸಾಹಿತ್ಯ ಪರಿಷತ್ ಆಗಲಿ ಅಥವಾ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಕ್ರಿಯವಾಗಿರುವ ಗಾಂಧಿ ಪೀಠಗಳಾಗಲಿ ಈ ಕೃತಿಯ ಬಗ್ಗೆ ವಿಚಾರ ಸಂಕಿರಣವಿರಲಿ ಒಂದು ಕಿರು ಚರ್ಚೆ ಏರ್ಪಡಿಸಿದ್ದೂ ನನ್ನ ಗಮನಕ್ಕೆ ಬಂದಿಲ್ಲ. ವಿಚಾರ ಸಂಕಿರಣ, ಚರ್ಚೆಯಂತಹ ಗೌರವ ಬರೇ ಇದೊಂದೇ ಪುಸ್ತಕಕ್ಕೆ ಎಂದಲ್ಲ, ಆಯಾ ವರ್ಷ ಉನ್ನತ ಪ್ರಶಸ್ತಿ– ಪುರಸ್ಕಾರ ಪಡೆದ ಎಲ್ಲ ಕೃತಿಗಳಿಗೂ ಸಲ್ಲಬೇಕು.

‘ಗಾಂಧಿ ಕಥನ’ಕ್ಕೆ ಮೇಲೆ ಹೇಳಿದ ಸಂಸ್ಥೆಗಳಲ್ಲಿ ವಿಚಾರ ಸಂಕಿರಣದ ಗೌರವ, ಮನ್ನಣೆ ಸಿಗದಿರುವುದಕ್ಕೆ ಬಹುಶಃ ಗಾಂಧಿಯ ಬಗ್ಗೆ ಇರುವ ಉದಾಸೀನವೇ ಕಾರಣವಿರಬಹುದು. ಇದೇ 30ಕ್ಕೆ ಗಾಂಧಿ ನಿಧನರಾಗಿ 75 ವರ್ಷಗಳಾಗುತ್ತವೆ. ಈ ಸಂದರ್ಭವೂ ನೆನಪಿಗೆ ಬಂದು ಇದೆಲ್ಲಾ ಬರೆಯುವ ಹಾಗಾಯಿತು. ಬಹುಶಃ ಗಾಂಧಿ ಕಥನಕಾರ ಬದುಕಿದ್ದರೆ ಇದನ್ನೆಲ್ಲಾ ಪ್ರಸ್ತಾಪಿಸಲು ನಾನು ಧೈರ್ಯ ಮಾಡುತ್ತಿರಲಿಲ್ಲ.
–ಸವಿತಾ ನಾಗಭೂಷಣ, ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.