ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರದಿಂದ ಕಾಗಿನೆಲೆಯನ್ನು ಕೇಂದ್ರವಾಗಿಟ್ಟು ಯಾವುದೇ ಕಾರ್ಯಕ್ರಮ ನಡೆದಂತಿಲ್ಲ. ಕಾಗಿನೆಲೆ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಕನಕದಾಸರ ಕೀರ್ತನೆ, ಕೃತಿಗಳ ಕುರಿತಂತೆ ಚರ್ಚೆಯಾಗಲೀ ಸಂವಾದಗಳಾಗಲೀ ಕಾವ್ಯ-ಕಮ್ಮಟಗಳಾಗಲೀ ಒಂದೆರಡು ವರ್ಷಗಳಿಂದ ನಡೆದಿಲ್ಲ.
ಕನಕದಾಸರ ಕೃತಿಗಳ ಓದು, ಅರ್ಥೈಸುವಿಕೆಯಂತಹ ಕಾರ್ಯಕ್ರಮಗಳು ನಾಡಿನ ಯುವ ಬರಹಗಾರರು ಸೇರಿದಂತೆ, ಪದವಿ ವಿದ್ಯಾರ್ಥಿಗಳಿಗೆ ಬಹಳಷ್ಟು ಅವಶ್ಯಕ. ಈ ದಿಸೆಯಲ್ಲಿ ‘ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರ’ದ ಸಮನ್ವಯಕಾರರು ಅಥವಾ ಅಧ್ಯಕ್ಷರು ಚಿಂತಿಸಿ ಕನಕದಾಸರ ಕೃತಿಗಳ ಕುರಿತು ಹೆಚ್ಚು ಹೆಚ್ಚು ಚರ್ಚಿಸುವ, ಮರು ಓದನ್ನು ಮಾಡುವ, ಅವರ ಕೃತಿಗಳಲ್ಲಿರುವ ಜೀವನ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯಕ್ರಮಗಳನ್ನು ಕನಕದಾಸ ಅಧ್ಯಯನ ಕೇಂದ್ರದಿಂದ ಮಾಡಬೇಕಾಗಿದೆ.
ಕೋವಿಡ್ನಂತಹ ದುರಿತ ಕಾಲದಲ್ಲಿಯೂ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯ-ಕಮ್ಮಟ, ಹಳೆಗನ್ನಡ ಓದು, ಕಥಾ ಕಮ್ಮಟ, ವಿಜ್ಞಾನ ಕಮ್ಮಟ, ಅಡಿಗರ ಜನ್ಮಶತಮಾನೋತ್ಸವ ವಿಚಾರ ಸಂಕಿರಣ... ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ನಾಡಿನ ಯುವ ಬರಹಗಾರರನ್ನು ಮತ್ತಷ್ಟು ಕ್ರಿಯಾಶೀಲರಾಗಿರುವಂತೆ ಮಾಡಿದೆ. ಆದರೆ, ಮೌಢ್ಯಗಳು, ಕಂದಾಚಾರಗಳು, ಕುಲದ ತಾರತಮ್ಯದ ಕುರಿತಂತೆ ಸಾತ್ವಿಕ ಪ್ರತಿರೋಧ ಒಡ್ಡಿದ ಕನಕದಾಸರ ಅಧ್ಯಯನ ಕೇಂದ್ರದಿಂದ ಕಾರ್ಯಕ್ರಮಗಳು ನಡೆಯದಿರುವುದು ಬರಹಗಾರರು ಮತ್ತು ಓದುಗರಿಗೆ ನೋವನ್ನು ತಂದಿದೆ.
ಮಲ್ಲಪ್ಪ ಫ. ಕರೇಣ್ಣನವರ, ಮೋಟೆಬೆನ್ನೂರು, ಬ್ಯಾಡಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.