ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಾಲ್ಗೊಂಡಿದ್ದ ಸತ್ಯಸಾಯಿ ಆಸ್ಪತ್ರೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ಆಗಿದ್ದ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ತೆಗೆದುಕೊಳ್ಳಬಹುದಾದ ಕ್ರಮ ಅಷ್ಟೆ. ಆದರೆ ಅದರಲ್ಲಿ ಕನ್ನಡ ಬೆಳೆಸುವ ಮಾರ್ಗ ಅರಸಲಾದೀತೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ! ಎಲ್ಲ ಸರ್ಕಾರಗಳಿಗೂ ರಾಜಕೀಯ ಅಸ್ತಿತ್ವ ಮತ್ತು ಅಧಿಕಾರವಷ್ಟೇ ಮುಖ್ಯ, ಕನ್ನಡದ ಅಳಿವು ಉಳಿವು ಬೇಡದ ಲೊಳಲೊಟ್ಟೆ ಎಂಬಂತಾಗಿದೆ. ಹಾಗಾದರೆ ಕನ್ನಡ ಉಳಿಸಿ ಬೆಳೆಸುವ ಬಗೆ ಹೇಗೆ?
ಈ ಪ್ರಶ್ನೆಗೆ ಉತ್ತರ ಇದೆ. ಶಿಕ್ಷಣ, ಉದ್ಯೋಗ, ವಹಿವಾಟು ಸೇರಿದಂತೆ ಕನ್ನಡ ಭಾಷೆ ನಿತ್ಯ ಬದುಕಿನ ಸರಕಾಗಬೇಕು. ಅಂತಹ ವಾತಾವರಣ ಉಂಟು ಮಾಡಿದರೆ ಮಾತ್ರ ಕನ್ನಡ ಭಾಷೆ ಬೆಳೆಯಬಲ್ಲದು. ಆ ಇಚ್ಛಾಶಕ್ತಿ ಬರದ ಹೊರತು, ಸರ್ಕಾರದ ಕೃಪಾಪೋಷಿತ ಪ್ರಾಧಿಕಾರದಂತಹ ಸಂಘ ಸಂಸ್ಥೆಗಳು ಭುಸುಗುಡುತ್ತಲೇ ಇರಬೇಕಾಗುತ್ತದೆ, ಕಚ್ಚಲು ಸಾಧ್ಯವಾಗದಂತಹ ಹಾವಿನಂತೆ!
- ಆರ್.ವೆಂಕಟರಾಜು,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.