
ತಮನ್ನಾ ಭಾಟಿಯಾ
ಪಿಂಚಣಿ ಸ್ಥಗಿತ: ಸಂಕಷ್ಟದಲ್ಲಿ ವಿಧವೆಯರು
ವಿಧವೆಯರು ಹಾಗೂ ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರ ಮಾಸಿಕ ಪಿಂಚಣಿ ನೀಡುತ್ತಿರುವುದು ಸರಿಯಷ್ಟೆ. ಆದರೆ, ಸುಮಾರು ಒಂದೂವರೆ ವರ್ಷದಿಂದ ವಿಧವಾ ಪಿಂಚಣಿಯನ್ನು ತಡೆ ಹಿಡಿಯಲಾಗಿದೆ. ಈ ಹಣವನ್ನೇ ನಂಬಿಕೊಂಡಿರುವ ಸಾವಿರಾರು ಫಲಾನುಭವಿಗಳು ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯ ಮುಖ್ಯ ಕಾರ್ಯದರ್ಶಿ ಅವರು, ಈ ಬಗ್ಗೆ ಪರಿಶೀಲನೆ ನಡೆಸಿ ಬಾಕಿ ಇರುವ ಪಿಂಚಣಿ ಮೊತ್ತ ಪಾವತಿಯ ಜೊತೆಗೆ, ನಿಯಮಿತವಾಗಿ ಪಿಂಚಣಿಯನ್ನು ಪಾವತಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕಿದೆ.
-ಬೆಂ.ಮು. ಮಾರುತಿ, ಬೆಂಗಳೂರು
****
ಪರಭಾಷಾ ಮೋಹ: ಸಂಸದರು ಮರೆತರೆ?
ಮೈಸೂರು ಸ್ಯಾಂಡಲ್ ಸೋಪಿಗೆ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿ ದ್ದಾರೆ. ಇದಕ್ಕೆ ಪರ–ವಿರೋಧ ವ್ಯಕ್ತವಾಗುತ್ತಿದೆ. ಸ್ಥಳೀಯ ನಟಿಯರಿಗೆ ಆದ್ಯತೆ ನೀಡ ಬೇಕಿತ್ತು ಎನ್ನುವುದು ಕೆಲವರ ವಾದ. ಅರ್ಹತೆ ಮತ್ತು ವ್ಯವಹಾರ ಪರಿಗಣನೆಯ ಆಧಾರದ ಮೇಲೆ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವುದು ಸರ್ಕಾರದ ಹೇಳಿಕೆ. ಚಿಕ್ಕಬಳ್ಳಾಪುರದ ಸಂಸದ ಡಾ. ಕೆ. ಸುಧಾಕರ್ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದು ಸೋಜಿಗ. ಚಿಕ್ಕಬಳ್ಳಾಪುರದ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ನೆರೆಯ ರಾಜ್ಯದ ತೆಲುಗು ನಟ, ನಟಿಯರನ್ನು ಬಳಸಿಕೊಂಡಿದ್ದನ್ನು ಸಂಸದರು ಇಷ್ಟು ಬೇಗ ಮರೆತಿರುವುದು ಹೇಗೆ?
-ನೇತ್ರಾರಂಗ, ಬೆಂಗಳೂರು
****
ಇ–ಸ್ಟ್ಯಾಂಪ್ ಕಮಿಷನ್ ಗೊಂದಲಮಯ
ಸಾರ್ವಜನಿಕರು ಅಫಿಡೆವಿಟ್, ಬಾಡಿಗೆ–ಭೋಗ್ಯದ ಕರಾರು ಹಾಗೂ ಇತರೆ ಒಪ್ಪಂದ ಪತ್ರಗಳನ್ನು ಕಾನೂನು ಪ್ರಕಾರ ಇಂಡಿಯನ್ ನಾನ್ ಜುಡಿಷಿಯಲ್ ಇ-ಸ್ಟ್ಯಾಂಪ್ನಲ್ಲೇ ಮುದ್ರಿಸ ಬೇಕಿದೆ. ಬ್ಯಾಂಕ್ನಲ್ಲಿ ಸಾಲ ಪಡೆಯುವಾಗ ಅಡಮಾನ ಪತ್ರಕ್ಕೂ ಇ-ಸ್ಟ್ಯಾಂಪ್ ಸಲ್ಲಿಸಬೇಕಿದೆ. ಆದರೆ, ಸಾರ್ವಜನಿಕರಿಗೆ ಇ-ಸ್ಟ್ಯಾಂಪ್ ಪಡೆಯುವಾಗ ಮೊತ್ತಕ್ಕೆ ಅನುಗುಣವಾಗಿ ನೀಡುವ ಕಮಿಷನ್ ಬಗ್ಗೆ ಗೊತ್ತಿರುವುದಿಲ್ಲ. ಸ್ಟ್ಯಾಂಪ್ ನೀಡುವವರು ಮೌಖಿಕವಾಗಿ ಹೇಳುವ ಮೊತ್ತ ಪಾವತಿಸುತ್ತಾರೆ. ಈ ಕಮಿಷನ್ ಶುಲ್ಕವು ಇ-ಸ್ಟ್ಯಾಂಪ್ನಲ್ಲೂ ನಮೂದು ಆಗುವುದಿಲ್ಲ. ಎಷ್ಟು ಮೊತ್ತಕ್ಕೆ ಎಷ್ಟು ಕಮಿಷನ್ ನೀಡಬೇಕು ಎಂಬ ಬಗ್ಗೆ ಅಧಿಕೃತ ಕೇಂದ್ರಗಳಲ್ಲಿ ಪ್ರದರ್ಶಿಸಬೇಕಿದೆ.
→⇒ಪುನೀತ್ ಎನ್., ಮೈಸೂರು
****
‘ವಂದೇ ಮಾತರಂ’ ಯುವಜನರಿಗೆ ಸ್ಫೂರ್ತಿ
‘ವಂದೇ ಮಾತರಂ’ ಬರೀ ಗೀತೆಯಲ್ಲ; ಅದು ಸ್ವಾತಂತ್ರ್ಯ ಹೋರಾಟದ ಮಂತ್ರ ವಾಗಿತ್ತು. ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಹೋರಾಡಲು ಈ ಎರಡು ಪದಗಳು ನೀಡಿದ ಶಕ್ತಿ ಅಪಾರ. ಯುವಪೀಳಿಗೆಗೆ ಈ ಗೀತೆಯ ಹಿಂದಿರುವ ಐತಿಹಾಸಿಕ ಹಿನ್ನೆಲೆ ಮತ್ತು ಭಾವನೆಗಳ ಅರಿವು ಮೂಡಿಸುವ ತುರ್ತಿದೆ. ಬಂಕಿಮಚಂದ್ರರ ‘ಆನಂದಮಠ’ ಕಾದಂಬರಿಯ ಭಾಗವಾಗಿ ಮೂಡಿಬಂದ ಈ ಗೀತೆ ಭಾರತಮಾತೆ ಯನ್ನು ನೆಲವಾಗಿಯಷ್ಟೇ ನೋಡದೆ, ಪೂಜನೀಯ ಶಕ್ತಿಯಾಗಿ ಬಿಂಬಿಸುತ್ತದೆ. ಶಾಲೆ–ಕಾಲೇಜು, ಸಾರ್ವಜನಿಕ ಸಮಾರಂಭಗಳಲ್ಲಿ ‘ವಂದೇ ಮಾತರಂ’ ಗೀತೆ ಯನ್ನು ಹಾಡುವುದು ದೇಶಪ್ರೇಮದ ಕೆಚ್ಚನ್ನು ಜಾಗೃತವಾಗಿಡಲು ನೆರವಾಗಲಿದೆ.
-ದೇವರಾಜ ಭಂಡಾರಿ, ಬಳಗಾನೂರ
****
ಜಿಬಿಎ ಅಧಿಕಾರಿಗಳ ಮೇಲೆ ಕ್ರಮ ಏಕಿಲ್ಲ?
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಕಟ್ಟಡದ ವಾಸ್ತವಕ್ಕಿಂತ ಕಡಿಮೆ ಅಳತೆ ನಮೂದಿಸಿ, ತೆರಿಗೆ ವಂಚಿಸಿದವರಿಂದ ₹370 ಕೋಟಿ ಬಾಕಿ ವಸೂಲಿಗೆ ಮುಂದಾ ಗಿದೆ. ಇದು ಸರಿ. ಆದರೆ, ಇದರಲ್ಲಿ ಅಧಿಕಾರಿಗಳ ಲೋಪವೂ ಇದೆ ಅಲ್ಲವೆ? ಆರು ವರ್ಷಗಳಿಂದ ಕರ್ತವ್ಯಭ್ರಷ್ಟರಾಗಿ ನಿದ್ರಿಸುತ್ತಿದ್ದ ಅಧಿಕಾರಿಗಳಿಗೆ ಹಿಂಬಡ್ತಿ, ವೇತನ ಕಡಿತದಂತಹ ಶಿಕ್ಷೆ ವಿಧಿಸಬೇಕಲ್ಲವೆ? ಹಿಂಬಾಕಿಯನ್ನು 15 ದಿನದೊಳಗೆ ಪಾವತಿಸುವಂತೆ ಸೂಚಿಸಲಾಗಿದೆ. ಬಾಡಿಗೆಯನ್ನೇ ನಂಬಿ ಬದುಕುತ್ತಿರುವ ಹಿರಿಯ ನಾಗರಿಕರು, ಬಡ ಮಧ್ಯಮ ವರ್ಗದ ಕುಟುಂಬದವರು ಇದಕ್ಕಾಗಿ ಸಾಲ ಮಾಡ ಬೇಕಾಗುತ್ತದೆ. ಏಪ್ರಿಲ್ನಲ್ಲಿ ಆದಾಯ ತೆರಿಗೆ, ಮನೆ ಕಂದಾಯ ಪಾವತಿ ಮಾಡ ಬೇಕಾಗಿದೆ. ಹಾಗಾಗಿ, ಸರ್ಕಾರವು ದಂಡ ಮನ್ನಾ ಮಾಡಿ ಅಳತೆ ವ್ಯತ್ಯಾಸದ ಬಾಕಿಯನ್ನು ಕಂತಿನ ರೂಪದಲ್ಲಿ ಪಾವತಿಸಲು ಅನುಕೂಲ ಕಲ್ಪಿಸಬೇಕಿದೆ.
-ಚಿ. ಉಮಾ ಶಂಕರ್ ಲಕ್ಷ್ಮೀಪುರ, ಬೆಂಗಳೂರು
****
ರಾಜತಾಂತ್ರಿಕ ಬಿಕ್ಕಟ್ಟು ಶಮನಗೊಳ್ಳಲಿ
ವಿಶ್ವಕಪ್ ಟಿ20 ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ಆಡಲು ಪಾಕಿಸ್ತಾನ ಸಮ್ಮತಿಸಿದೆ. ಇದು ಕ್ರೀಡಾಜಗತ್ತಿಗೆ ಸೀಮಿತವಾಗದೆ ರಾಜತಾಂತ್ರಿಕ ಮತ್ತು ಆರ್ಥಿಕ ದೃಷ್ಟಿಯಿಂದಲೂ ಮಹತ್ವದ ನಿರ್ಧಾರ. ಪಾಕಿಸ್ತಾನ ತಂಡ ಮೈದಾನಕ್ಕಿಳಿಯಲು ನಿರ್ಧರಿಸಿರುವುದು ಸ್ವಾಗತಾರ್ಹ. ಇದು ಜಾಹೀರಾತು ವಹಿವಾಟು ಮತ್ತು ಕ್ರೀಡಾ ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡುತ್ತದೆ. ಅಲ್ಲದೆ, ದಶಕಗಳಿಂದ ಹೆಪ್ಪುಗಟ್ಟಿ ರುವ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಮಂಜನ್ನು ಕರಗಿಸುವ ಶಕ್ತಿ ಹೊಂದಿದೆ. ಈ ‘ಕ್ರಿಕೆಟ್ ರಾಜತಾಂತ್ರಿಕತೆ’ಯು ಸದ್ಯ ಸ್ಥಗಿತಗೊಂಡಿರುವ ದ್ವಿಪಕ್ಷೀಯ ಸರಣಿಗಳ ಪುನರಾರಂಭಕ್ಕೆ ಮತ್ತು ಏಷ್ಯಾದಲ್ಲಿ ಕ್ರೀಡಾ ಹೂಡಿಕೆದಾರರ ವಿಶ್ವಾಸ ಹೆಚ್ಚಿಸಲು ಭದ್ರ ತಳಪಾಯವಾಗಬಲ್ಲದು.
-ಎಸ್.ಎನ್. ಭಟ್, ಸೈಪಂಗಲ್ಲು
****
‘ಸೌಂದಾಳಾ’ ಮಾದರಿ
ಭಲೇ ಮಹಾರಾಷ್ಟ್ರದ ಸೌಂದಾಳಾ
ಏನು ನಿನ್ನ ಸೌಂದರ್ಯ!
ನೀನಾಗಿರುವೆ ಜಾತಿಮುಕ್ತ ಗ್ರಾಮ
ಹೇಳುವರು ನಿನ್ನೂರಿನವರು
‘ನಮ್ಮದು ಮನುಷ್ಯ ಜಾತಿ’
‘ಮಾನವೀಯತೆ ನಮ್ಮ ಜಾತಿ’ ಎಂದು
ಜಾತಿಧ್ರುವೀಕರಣದ ವಿಷಮ ಕಾಲದಲಿ
ಜಾತಿಸಂಕೋಲೆಯಲಿ ನರಳುವವರಿಗೆ
ನೀನಾಗಿರುವೆ ಮಾದರಿ ಪ್ರೇರಣೆ!
-ಸಿ.ಪಿ. ಸಿದ್ಧಾಶ್ರಮ, ಮೈಸೂರು