ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಕಟ್ಟಡದ ಮೂರನೇ ಮಹಡಿಯಲ್ಲಿನ ‘ಕುವೆಂಪು ಸಭಾಂಗಣ’ದಲ್ಲಿ ಇತ್ತೀಚೆಗೆ ನಡೆದ ಸನ್ಮಾನ ಸಮಾರಂಭಕ್ಕೆ ಹೋಗುವ ಸಂದರ್ಭ ಒದಗಿತ್ತು. ಆ ಸಭಾಂಗಣ, ಪ್ರೇಕ್ಷಕರಿಗಾಗಿ ಹಾಕಿದ್ದ ಕುರ್ಚಿಗಳು, ಸುತ್ತಲಿನ ಗೋಡೆ, ವೇದಿಕೆಗೆ ಹಾಕಿದ್ದ ನೆಲಹಾಸು, ಪೀಠೋಪಕರಣ, ಅದನ್ನು ಮುಚ್ಚಲು ಬಳಸಿದ್ದ ಬಟ್ಟೆ, ಉಪನ್ಯಾಸ ವೇದಿಕೆಯ ಹಿಂದೆ ಇಳಿಬಿಟ್ಟಿದ್ದ ಪರದೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಾಗ,ಕನ್ನಡಕ್ಕಿರುವ ಬಡತನವನ್ನು ಆ ಸಭಾಂಗಣ ನಮ್ಮ ಮುಂದೆ ತಂದು ನಿಲ್ಲಿಸಿದಂತಿತ್ತು. ಇಂಥ ಸಭಾಂಗಣಕ್ಕೂಕುವೆಂಪು ಅವರಂಥ ಶುಭ್ರ, ತೇಜಸ್ವಿ ವ್ಯಕ್ತಿತ್ವಕ್ಕೂ ಎಲ್ಲಿಂದೆಲ್ಲಿಯ ಹೋಲಿಕೆ?
ಇಟ್ಟ ಹೆಸರಿಗೆ ತಕ್ಕಂತೆ ಸಭಾಂಗಣವನ್ನು ಸರಳವಾಗಿ, ಅಚ್ಚುಕಟ್ಟಾಗಿ, ಕಣ್ಮನಕ್ಕೆ ಹಿತವಾಗುವ ಹಾಗೆ ಸಜ್ಜುಗೊಳಿಸಲು ಸಾಧ್ಯವಿಲ್ಲದಂಥ ಬರ ಬಂದಿದೆಯೇ? ಹಣದ ಕೊರತೆಯೇ? ಕೆಲವೇ ನಿಮಿಷಗಳ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಮ್ಮ ಸರ್ಕಾರ ಲಕ್ಷಾಂತರ ರೂಪಾಯಿ ವ್ಯಯಿಸುತ್ತದೆ.
ಹೊಸದಾಗಿ ನೇಮಕಗೊಂಡ ಮಂತ್ರಿಗಳ ಅಭಿಲಾಷೆ ಪೂರೈಸಲು ಅವರಿಗೆ ಮೀಸಲಾದ ಕೊಠಡಿಯನ್ನು ಹತ್ತಾರು ಲಕ್ಷ ರೂಪಾಯಿ ವೆಚ್ಚದಲ್ಲಿ ಸಜ್ಜುಗೊಳಿಸಲು ಹಣಕ್ಕೆ ಬರ ಇಲ್ಲ. ಕನ್ನಡ ಮತ್ತು ಅದಕ್ಕೆ ಸಂಬಂಧಿಸಿದ ವಿಷಯದಲ್ಲಿ ಹಣಕ್ಕೆ ತತ್ವಾರ! ಇದು ಎಂಥ
ಶೋಚನೀಯ ಸ್ಥಿತಿ?
ಸಾಮಗ ದತ್ತಾತ್ರಿ,ಬೆಂಗಳೂರು
***
ವರ್ಷ ಸಂಜೀವಿನಿ...
ಬಂಡೀಪುರದಲ್ಲಿ ವರ್ಷಧಾರೆಯಂತೆ. ಬಹುಶಃ ಮಾನವನ ರಾಕ್ಷಸಿ ಪ್ರವೃತ್ತಿಯಿಂದ (ಕಾಳ್ಗಿಚ್ಚು ಕಾರಣ) ಬೇಸತ್ತು, ಪ್ರಕೃತಿ ಮಾತೆಯೇ ಮಳೆ ಕರುಣಿಸಿರಬೇಕು. ಸುಟ್ಟ ಗಿಡ–ಮರಗಳಿಗೆ ಈ ಮಳೆ ಸಂಜೀವಿನಿಯಾಗಲಿ, ಅವುಗಳು ಶೀಘ್ರ ಚಿಗುರೊಡೆಯಲಿ. ‘ಬೆಂಕಿಪುರ’ವಾಗಿದ್ದ ಬಂಡೀಪುರ ಹಸಿರಿನಿಂದ ಮತ್ತೆ ಕಂಗೊಳಿಸಲಿ. ಸಕಲ ಜೀವರಾಶಿಗೆ ಆಶ್ರಯವಾಗಲಿ.
ನಗರ ಗುರುದೇವ್ ಭಂಡಾರ್ಕರ್,ಹೊಸನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.