‘ಮುಸ್ಲಿಮರು ನನಗೆ ವೋಟು ಹಾಕಿಲ್ಲ. ಆದ್ದರಿಂದ ಆ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದಿಲ್ಲ’ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಹೇಳಿರುವುದು (ಪ್ರ.ವಾ., ಜ. 23) ಖಂಡನೀಯ. ಶಾಸಕನಾಗಿ ಆಯ್ಕೆಯಾದ ಮೇಲೆ ತನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಬೇಕಾದುದು ಆ ಶಾಸಕನ ಕರ್ತವ್ಯ. ‘ಯಾವುದೇ ಭೇದಭಾವ ತೋರದೆ ಕ್ಷೇತ್ರದ ಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿ, ಈ ರೀತಿ ಉಡಾಫೆಯಿಂದ ಮಾತನಾಡುವುದು ಅಕ್ಷಮ್ಯ ಮತ್ತು ಸಂವಿಧಾನಕ್ಕೆ ಎಸಗುವ ದ್ರೋಹ.
ಮುಸ್ಲಿಮರು ತಮಗೆ ಮತ ಹಾಕಿಲ್ಲ ಎಂದು ಇವರಿಗೆ ತಿಳಿಸಿದ್ದು ಯಾರು? ಚುನಾವಣಾ ಆಯೋಗವೇ? ಹಾಗಾದರೆ ಇವರದ್ದು ನ್ಯಾಯಬದ್ಧ ಆಯ್ಕೆ ಅಲ್ಲವೇ? ಹೊನ್ನಾಳಿಯಲ್ಲಿ ಗುಪ್ತ ಮತದಾನ ನಡೆದಿಲ್ಲವೇ? ಪ್ರವಾಹ ಸಂತ್ರಸ್ತರನ್ನು ರಕ್ಷಿಸುವ ನೆಪದಲ್ಲಿ, ಒಂದು ಅಡಿ ನೀರಿನಲ್ಲಿ ದೋಣಿ ನಡೆಸಿ ನಗೆಪಾಟಲಿಗೆ ಗುರಿಯಾಗಿದ್ದ ಶಾಸಕರು, ಇನ್ನಾದರೂ ಸ್ವಲ್ಪ ಜವಾಬ್ದಾರಿ ಅರಿತು ಮಾತನಾಡಲಿ.
–ವಿ.ತಿಪ್ಪೇಸ್ವಾಮಿ,ಹಿರಿಯೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.