ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 23:30 IST
Last Updated 23 ಡಿಸೆಂಬರ್ 2025, 23:30 IST
   

ಒಂದೇ ದಿನ 2 ಪರೀಕ್ಷೆ: ಗೊಂದಲ ಸೃಷ್ಟಿ

ಕೇಂದ್ರೀಯ ವಿದ್ಯಾಲಯ, ಜವಾಹರ್‌ ನವೋದಯ ವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಜನವರಿ 10 ಮತ್ತು 11ರಂದು ಸ್ಪರ್ಧಾತ್ಮಕ ಪರೀಕ್ಷೆ ನಿಗದಿಯಾಗಿದೆ. ಇದರಿಂದ ಈ ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿ ಸಿದ್ಧತೆ ನಡೆಸಿರುವ ಉದ್ಯೋಗಾಕಾಂಕ್ಷಿಗಳಲ್ಲಿ ಗೊಂದಲ ಏರ್ಪಟ್ಟಿದೆ.

ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕರೆ‌ ಮಾಡಿದರೆ ಈಗಾಗಲೇ
ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿಮಗೆ ಯಾವ ಹುದ್ದೆ ಅಗತ್ಯವಿದೆಯೋ ಆ ಪರೀಕ್ಷೆ ಬರೆಯಿರಿ ಎಂಬ ಉತ್ತರ‌ ನೀಡುತ್ತಾರೆ. ದಿನಾಂಕ ಮುಂದೂಡಿಕೆ
ಆಗದಿದ್ದರೆ ಎರಡೂ ಪರೀಕ್ಷೆಗಳಿಗೆ ಶುಲ್ಕ ಪಾವತಿಸಿದವರಿಗೆ ತೊಂದರೆಯಾಗಲಿದೆ. ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳ ಹಿತ ಕಾಪಾಡಲು ತ್ವರಿತ ಕ್ರಮಕ್ಕೆ ಮುಂದಾಗಬೇಕಿದೆ. 

ADVERTISEMENT

-ಶಾಂತಕುಮಾರಿ ಕೆ., ಬೆಂಗಳೂರು 

ಪ್ರಯಾಣಿಕರ ಜತೆ ಅನುಚಿತ ವರ್ತನೆ ಸಲ್ಲ

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಇತ್ತೀಚೆಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ಜನ ಪ್ರಯಾಣಿಸುವುದು ಸರ್ವೇಸಾಮಾನ್ಯ. ಈ ಕಾರಣದಿಂದ ಜನರನ್ನು ನಿಯಂತ್ರಿಸಲು ಕೆಲವು ನಿಲ್ದಾಣಗಳಲ್ಲಿ ಚಾಲಕರು ಬಸ್ ನಿಲ್ಲಿಸದೆ ಹೋಗುವುದುಂಟು. ಇದರಿಂದ ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಗಮ್ಯ ಸ್ಥಾನ ತಲಪಲು ತೊಂದರೆಯಾಗುತ್ತಿದೆ. ಕೆಲವು ನಿರ್ವಾಹಕರು ಬಸ್‌ನಲ್ಲಿ ಪ್ರಯಾಣಿಸುವ ವಯೋವೃದ್ಧರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರನ್ನು ಬಸ್ ಹತ್ತುವಾಗ, ಇಳಿಯುವಾಗ ಏಕವಚನದಲ್ಲಿ ಗದರಿಸುತ್ತಾರೆ. ಸರಿಯಾಗಿ ಚಿಲ್ಲರೆ ನೀಡುವುದಿಲ್ಲ. ಚಿಲ್ಲರೆಗಾಗಿ ವಾದ, ವಿವಾದ ನಡೆದು ಜಗಳ ತಾರಕಕ್ಕೇರಿರುವ ಉದಾಹರಣೆಗಳಿವೆ.  ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ನಿರ್ವಾಹಕರು ಮತ್ತು ಚಾಲಕರಿಗೆ ನಿಗಮದ ಹಿರಿಯ ಅಧಿಕಾರಿಗಳು ಸೂಚಿಸಬೇಕಿದೆ. 

⇒ದರ್ಶನ್ ಚಂದ್ರ ಎಂ.ಪಿ., ಚಾಮರಾಜನಗರ
ಮರ್ಯಾದೆಗೇಡು ಹತ್ಯೆಗೆ ಕೊನೆ ಎಂದು?

ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಗರ್ಭಿಣಿಯ ಮರ್ಯಾದೆಗೇಡು ಹತ್ಯೆಯಾಗಿರುವುದು ಅಮಾನವೀಯ. ಆಧುನಿಕ ಯುಗದಲ್ಲೂ ಮರ್ಯಾದೆಯ ಹೆಸರಿನಲ್ಲಿ ಮಹಿಳೆಯರ ಹತ್ಯೆ ನಡೆಯುತ್ತಿದೆ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆಗೆ ಈ ಪ್ರಕರಣಗಳು ಕನ್ನಡಿ ಹಿಡಿದಿವೆ. ತಮ್ಮಿಷ್ಟದಂತೆ ಬದುಕುವ ಹಕ್ಕು ಎಲ್ಲರಿಗೂ ಇದೆ. ಮರ್ಯಾದೆಗೆ ಧಕ್ಕೆಯಾಯಿತು ಎಂದು ಅನೈತಿಕತೆಯ ದಂಡವನ್ನು ಕೈಗೆ ತೆಗೆದುಕೊಂಡು ಶಿಕ್ಷಿಸುವ ಅಧಿಕಾರ ಯಾರಿಗೂ ಇಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಮುಂದಾಗಬೇಕಿದೆ. ಜೊತೆಗೆ, ಅಂತರ್ಜಾತಿ ವಿವಾಹವಾಗಿ ಜೀವಭಯ ಇರುವವರಿಗೆ ಸೂಕ್ತ ರಕ್ಷಣೆಯನ್ನೂ ನೀಡಬೇಕಿದೆ. 

-ರೇಣುಕಾ ಹನ್ನುರ್, ಕಲಬುರಗಿ

ಬಿಸಿಯೂಟ ವಿಸ್ತರಣೆ ಕ್ರಮ ಸ್ವಾಗತಾರ್ಹ

ಎಲ್‌ಕೆಜಿ, ಯುಕೆಜಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೂ ಬಿಸಿಯೂಟ ವಿಸ್ತರಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹವಾದುದು. ವಿದ್ಯಾರ್ಥಿಗಳಿಗೆ ಬಿಸಿಯೂಟ, ನೋಟ್‌ಬುಕ್, ಪಠ್ಯಪುಸ್ತಕ, ಶೂ, ಸಾಕ್ಸ್, ಹಾಲು, ಮೊಟ್ಟೆ ವಿತರಿಸುವುದರಿಂದ ಶಾಲಾ- ಕಾಲೇಜುಗಳಲ್ಲಿ ಹಾಜರಾತಿ ಹೆಚ್ಚಲಿದೆ. ಇದು ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದ ಸುಧಾರಣೆಗೆ ಸಹಕಾರಿಯಾಗಲಿದೆ. ಆಹಾರ ಕಿಟ್‌ನಂತೆ ಪುಸ್ತಕ ಕಿಟ್ ನೀಡಿದರೆ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. 

-ಸಾಗರ್‌ ಗೌಡ ದರೂರ್, ಬಳ್ಳಾರಿ 

ರಾಜ್ಯದಲ್ಲಿ ಬೆಲೆ ಏರಿಕೆ: ಖರ್ಗೆ ಮೌನವೇಕೆ?

ಒಂದೇ ವರ್ಷದಲ್ಲಿ ಮೋದಿ ಸರ್ಕಾರ ಎರಡು ಬಾರಿ ರೈಲು ಪ್ರಯಾಣ ದರ ಏರಿಸಿದೆ. ಜನಸಾಮಾನ್ಯರನ್ನು ಲೂಟಿ ಹೊಡೆಯುವುದಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅವರದೇ ಪಕ್ಷ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದೆ. ಬಸ್ ದರ, ಇಂಧನ, ದಸ್ತಾವೇಜು ಪತ್ರ, ಹಾಲು, ಮೊಸರು, ಮದ್ಯದ ಬೆಲೆ ಏರಿಕೆ ಮಾಡಿದೆ. ಬೆಲೆ ಏರಿಕೆಯ ಬಾಣಲೆಯಲ್ಲಿ ಬಿದ್ದು ಜನರು ವಿಲವಿಲ ಒದ್ದಾಡುತ್ತಿದ್ದಾರೆ. ಇದನ್ನು ನೋಡಿಯೂ ಖರ್ಗೆಯವರು ಸುಮ್ಮನಿರುವುದೇಕೆ? ಗಾಜಿನ ಮನೆಯಲ್ಲಿ ನಿಂತು ಇತರರಿಗೆ ಕಲ್ಲು ಬೀಸಬಾರದಲ್ಲವೇ?  

-ಪತ್ತಂಗಿ ಎಸ್. ಮುರಳಿ, ಬೆಂಗಳೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.