ADVERTISEMENT

ಸ್ವಾಮಿಗಳು ಮತ್ತು ಚುನಾವಣಾ ರಾಜಕೀಯ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 20:38 IST
Last Updated 15 ನವೆಂಬರ್ 2019, 20:38 IST

ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ರಟ್ಟೀಹಳ್ಳಿ ಕಬ್ಬಿಣಕಂಥಿಮಠದ ಸ್ವಾಮೀಜಿ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಾಗಿ ವರದಿಯಾಗಿದೆ (ಪ್ರ.ವಾ., ನ. 15). ಹೀಗೆ ಸ್ವಾಮೀಜಿಯೊಬ್ಬರು ಚುನಾವಣಾ ಕಣಕ್ಕೆ ಇಳಿಯುವುದು ಹೊಸ ವಿಷಯವೆಂದೇನೂ ಅನ್ನಿಸುವುದಿಲ್ಲ.

ಏಕೆಂದರೆ ಈಗಾಗಲೇ ಸ್ವಾಮಿ, ಸಂತರು ರಾಜಕೀಯದಲ್ಲಿ ಇರುವುದನ್ನು ನಾವು ಕಾಣುತ್ತಿದ್ದೇವೆ. ಇದಕ್ಕೂ ಮೊದಲು ಪರೋಕ್ಷವಾಗಿ ರಾಜಕೀಯ ನಡೆಸುತ್ತಿದ್ದ ಸ್ವಾಮಿಗಳು ಇದೀಗ ಮುನ್ನೆಲೆಗೆ ಬಂದು ರಾಜಕೀಯ ನಡೆಸುತ್ತಿದ್ದಾರೆ.

‘ಸ್ವಾ’ ಎಂದರೆ ತೊರೆ, ಬಿಟ್ಟುಬಿಡು. ‘ಮಿ’ ಎಂದರೆ ಮೋಹ, ಮಮಕಾರ ವರ್ಜಿಸಿ ತಾನು, ತನ್ನದು ಎಂಬುದನ್ನು ತೊರೆದು, ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿಕೊಳ್ಳುವುದು ಎಂದರ್ಥ. ಲೌಕಿಕದ ತಂದೆ-ತಾಯಿ, ಬಂಧು-ಬಳಗ ಎಲ್ಲರನ್ನೂ ಬಿಟ್ಟು, ಇಡೀ ಸಮಾಜವೇ ತನ್ನ ತಂದೆ-ತಾಯಿ, ಬಂಧು-ಬಳಗ ಎಂದು ಬಗೆದು ಸಮಾಜಸೇವೆ ಮಾಡಬೇಕಾದುದು ಇವರ ಕರ್ತವ್ಯ. ಇಂತಹ ಘನವಾದ ಸ್ಥಾನ ಹೊಂದಿರುವ ಸ್ವಾಮಿಗಳು ಇದೀಗ ಇಡೀ ಸಮಾಜದ ಉದ್ಧಾರಕ್ಕಾಗಿಯೇ ರಾಜಕೀಯ ಪ್ರವೇಶ ಪಡೆಯುತ್ತಿರಬಹುದೇ? ಅಥವಾ ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಳ್ಳಲು ಇರಬಹುದೇ? ಯಾರು ಬಲ್ಲರು?! ಆದರೆ ಸನ್ಯಾಸ ಜೀವನ ನಡೆಸುವ ಇವರು, ಚುನಾವಣೆಯಲ್ಲಿ ಗೆದ್ದು, ಲೌಕಿಕ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವೇ?

-ಶಿವರಂಜನ್ ಸತ್ಯಂಪೇಟೆ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.