ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳ ಸೇವಾ ದರವನ್ನು ನಿಯಂತ್ರಿಸುವ ಸಲುವಾಗಿ ಹಿಂದಿನ ಸರ್ಕಾರವು ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ ಆ್ಯಕ್ಟ್ ತರಲು ಮುಂದಾಗಿತ್ತು. ಆಗ ಪ್ರಮುಖ ವಿರೋಧ ಪಕ್ಷವಾಗಿದ್ದ ಈಗಿನ ಆಡಳಿತಾರೂಢ ಪಕ್ಷವು ಜಾಣ ಕುರುಡುತನ ತೋರಿತ್ತು. ಖಾಸಗಿ ಆಸ್ಪತ್ರೆಗಳ ಆಡಳಿತ ವರ್ಗವು ಮಸೂದೆಯ ವಿರುದ್ಧ ಕೆಟ್ಟ ಪ್ರಚಾರ ನಡೆಸಿತು. ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ, ಮೆಡಿಕಲ್ ಕಾಲೇಜು ಒಡೆತನ ಹೊಂದಿರುವವರು ರಾಜ್ಯದ ಮೂರೂ ದೊಡ್ಡ ಪಕ್ಷಗಳಲ್ಲಿ ಇದ್ದಾರೆ. ಜನಪರವಾಗಿದ್ದ ಒಂದು ಮಸೂದೆಯನ್ನು ಈ ಕಾಣದ ಕೈಗಳುವ್ಯವಸ್ಥಿತವಾಗಿ ವಿರೋಧಿಸಿ ಹಾಳುಗೆಡವಿದವು.
ಆದರೆ ಸಾಂಕ್ರಾಮಿಕದ ಬಿಕ್ಕಟ್ಟಿನ ಈ ಸನ್ನಿವೇಶದಲ್ಲಿ ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿ ಮತ್ತು ಅವುಗಳ ಆಡಳಿತ ಮಂಡಳಿಗಳು ತಳೆದಿರುವ ನಿಲುವು ಅಪಾಯಕಾರಿ. ಇಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಸ್ಪಂದಿಸದ ಆಸ್ಪತ್ರೆಗ ಳಿಗೆ ಸರ್ಕಾರ ಎಚ್ಚರಿಕೆ ನೀಡಿರುವುದನ್ನು ನೋಡಿದರೆ ವ್ಯಥೆಯಾಗುತ್ತದೆ. ಸೂಕ್ತ ಕಾನೂನಿನ ಬಲವಿಲ್ಲದೆ ಕೇವಲ ಬಾಯಿ ಮಾತಿನಿಂದ ಇವರನ್ನು ಕಟ್ಟಿಹಾಕಲಾಗದು. ಜನರ ಒಳಿತಿಗಾಗಿ ತರುವ ಮಸೂದೆಗಳನ್ನು ಪಕ್ಷಾತೀತವಾಗಿ ಬೆಂಬಲಿಸದೇ ಹೋದರೆ ಇಂತಹ ಸನ್ನಿವೇಶಗಳನ್ನು ಎದುರು ನೋಡಬೇಕಾಗುತ್ತದೆ. ಹೀಗಾಗಿ, ಜನಪರವಾದ ಕಾಯ್ದೆಯನ್ನು ಮರಳಿ ತರಲು ಇದು ಸಕಾಲ.
- ಕೆ.ಬಿ.ಕೆ.ಸ್ವಾಮಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.