ರೈತರ ಮಕ್ಕಳಿಗೆ ವಿಶೇಷ ಶಿಷ್ಯವೇತನ ನೀಡುವ ಯೋಜನೆ ಜಾರಿಗೆ ಕೃಷಿ ಇಲಾಖೆ ಆದೇಶ
ಹೊರಡಿಸಿದೆ (ಪ್ರ.ವಾ., ಆ. 8). ಪಿ.ಯು., ಐಟಿಐ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ
ಪ್ರಾರಂಭಿಸಿ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಸ್ನಾತಕೋತ್ತರ ಕೋರ್ಸ್ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳವರೆಗೆ ವಿಶೇಷ ಶಿಷ್ಯವೇತನ ಘೋಷಿಸಲಾಗಿದೆ.
ಸರ್ಕಾರದ ಈ ಕ್ರಮ ಶ್ಲಾಘನೀಯವಾದುದು. ಆದರೆ, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಹೆಸರಿನಲ್ಲಿ ಇಲ್ಲವೇ ಅವರ ಪೋಷಕರ ಹೆಸರಿನಲ್ಲಿ ಕೃಷಿ ಜಮೀನು ಇರಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ನಮ್ಮ ಸಮಾಜದಲ್ಲಿ ಕೃಷಿ ಕೆಲಸವನ್ನೇ ನಂಬಿಕೊಂಡು ಬದುಕುತ್ತಿರುವ ಅನೇಕರಿಗೆ ಕೃಷಿ ಭೂಮಿ ಇರುವುದಿಲ್ಲ. ಜಮೀನ್ದಾರರು ಹೊಲ ಗದ್ದೆಗಳಲ್ಲಿ ದುಡಿಯುವುದಿಲ್ಲ.
ಹಾಗಾಗಿ, ವಿಶೇಷ ಶಿಷ್ಯವೇತನಕ್ಕೆ ಅರ್ಹರಾಗಲು ಕೃಷಿ ಜಮೀನು ಹೊಂದಿರಬೇಕೆಂಬ ನಿಬಂಧನೆಯಿಂದ ಜಮೀನು ಹೊಂದಿರುವವರ ಮಕ್ಕಳಿಗೆ ಮಾತ್ರ ಅನುಕೂಲವಾಗುತ್ತದೆಯೇ ವಿನಾ ಜಮೀನು ಇಲ್ಲದ ಕೃಷಿಕರು ಹಾಗೂ ಕೃಷಿ ಕೂಲಿಕಾರ್ಮಿಕರ ಮಕ್ಕಳಿಗೆ ಪ್ರಯೋಜನವಾಗುವುದಿಲ್ಲ. ಕೋವಿಡ್ ಸಂಕಷ್ಟದ ಈ ಸಮಯದಲ್ಲಿ, ಅವರಿಗೆ ಸರ್ಕಾರದ ನೆರವಿನ ಅಗತ್ಯ ತುಂಬಾ ಇದೆ. ಅದರಿಂದ ಸರ್ಕಾರ ತನ್ನ ಆದೇಶದಲ್ಲಿ ಸೂಕ್ತ ಮಾರ್ಪಾಡು ಮಾಡುವ ಮೂಲಕ, ಜಮೀನು ಇಲ್ಲದ ಕೃಷಿಕರು ಮತ್ತು ಕೃಷಿ ಕೂಲಿಕಾರ್ಮಿಕರ ಮಕ್ಕಳಿಗೂ ವಿಶೇಷ ಶಿಷ್ಯವೇತನ ದೊರೆಯುವಂತೆ ಮಾಡಬೇಕು.
ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.