ಕೋವಿಡ್– 19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಬ್ಯಾಂಕಿಂಗ್ ಸೇವೆಯಲ್ಲಿ 3 ತಿಂಗಳ ಅವಧಿಗೆ ನೀಡಿದ್ದ ವಿನಾಯಿತಿಗಳು ಜೂನ್ ತಿಂಗಳಿಗೆ ಅಂತ್ಯವಾಗಿವೆ. ಇದರ ಪರಿಣಾಮವಾಗಿ ಎಟಿಎಂ ಶುಲ್ಕ, ಉಳಿತಾಯ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್, ದಂಡ, ಮತ್ತಿತರ ಹಳೆಯ ನಿಯಮಗಳನ್ನು ಜುಲೈ 1ರಿಂದ ಅನ್ವಯವಾಗುವಂತೆ ಪುನಃ ಜಾರಿಗೆ ತರಲಾಗಿದೆ. ಒಂದೆಡೆ, ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಏರುಗತಿಯಲ್ಲಿ ಸಾಗುತ್ತಿದೆ. ಇನ್ನೊಂದೆಡೆ, ಜನಸಾಮಾನ್ಯರ ಬದುಕು ಪಾತಾಳಕ್ಕೆ ಕುಸಿಯುತ್ತಿದೆ. ಲಾಕ್ಡೌನ್ನ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಜನರ ಕೈಯಲ್ಲಿ ಅತ್ತ ಕಾಸಿಲ್ಲದೆ ಇತ್ತ ದುಡಿಮೆಯೂ ಇಲ್ಲದೆ ದಿನನಿತ್ಯದ ಖರ್ಚುವೆಚ್ಚಗಳಿಗೆ ಪರಿತಪಿಸುವಂತಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ, ಬ್ಯಾಂಕಿಂಗ್ ಸೇವೆಗಳಿಗೆ ನೀಡಿದ್ದ ವಿನಾಯಿತಿಯನ್ನು ಹಿಂತೆಗೆದುಕೊಂಡಿರುವುದು ಜನಸಾಮಾನ್ಯರಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.
ಇದರ ನೇರ ಪರಿಣಾಮ ಹೆಚ್ಚಾಗಿ ಆಗುವುದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ. ಸರ್ಕಾರ ಈ ವಿಷಯವನ್ನು ಸೂಕ್ಷ್ಮವಾಗಿ ಪರಿಗಣಿಸಿ, ಬ್ಯಾಂಕಿಂಗ್ ಸೇವೆಗೆ ನೀಡಿದ್ದ ವಿನಾಯಿತಿಯನ್ನು ಕನಿಷ್ಠ ಇನ್ನೂ ಮೂರು ತಿಂಗಳ ಕಾಲ ಮುಂದುವರಿಸಬೇಕು.
- ಮುರುಗೇಶ ಡಿ.,ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.