ದಾವಣಗೆರೆಯಲ್ಲಿ ಪ್ರಯೋಗಾಲಯದ ತಪ್ಪಿನಿಂದ ‘ಕೊರೊನಾ ಪಾಸಿಟಿವ್’ ಎಂದು ಗುರುತಿಸಲಾಗಿದ್ದ ಮಹಿಳೆಗೆ ನೆಗೆಟಿವ್ ಎಂದು ಸಾಬೀತಾಗುವ ಹೊತ್ತಿಗೆ, ತಾಯಿಯಿಂದ ಬೇರ್ಪಡಿಸಿ ಇರಿಸಿದ್ದ ಆಕೆಯ ನವಜಾತ ಶಿಶು ಮೃತಪಟ್ಟಿದೆ (ಪ್ರ.ವಾ., ಜೂನ್ 25). ಕೊರೊನಾ ಸೋಂಕು ಹರಡುವಿಕೆ ಆರಂಭವಾದಾಗಿನಿಂದ ಇಲ್ಲಿಯವರೆಗೂ ಪ್ರಯೋಗಾಲಯದ ಒಂದಲ್ಲ ಒಂದು ಎಡವಟ್ಟಿನಿಂದ ಇಂತಹ ಅಚಾತುರ್ಯಗಳು ನಡೆಯುತ್ತಲೇ ಇವೆ. ಗರ್ಭಿಣಿಯರು, ವಯೋವೃದ್ಧರು, ದುರ್ಬಲ ಹೃದಯದವರು ತಮ್ಮದಲ್ಲದ ತಪ್ಪಿಗೆ ಇಂತಹ ಆಘಾತಕಾರಿ ವಿಷಯವನ್ನು ಹೇಗೆ ತಾನೇ ಅರಗಿಸಿಕೊಳ್ಳಲು ಸಾಧ್ಯ?
ಕೊರೊನಾ ವಿಷಯದಲ್ಲಿ ಫಲಿತಾಂಶ ಪಾಸಿಟಿವ್ ಬಂದರೆ, ಕುಟುಂಬದವರಿಂದ ಹಿಡಿದು ಇಡೀ ಊರಿನ ಜನ ಅವರನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಸಾಮಾಜಿಕ ಬಹಿಷ್ಕಾರದ ರೀತಿ ವಾರಗಟ್ಟಲೆ ಯಾರೂ ಅವರ ಹತ್ತಿರ ಸುಳಿಯವುದಿಲ್ಲ. ಅಂಥವರು ಏಕಾಂಗಿಯಾಗಿ ಪರಿತಪಿಸುವಂತಾಗುತ್ತದೆ. ಪ್ರಯೋಗಾಲಯಗಳು ಫಲಿತಾಂಶ ನೀಡಲು ಎರಡು-ಮೂರು ದಿನ ವಿಳಂಬ ಮಾಡಿದರೂ ಪರವಾಗಿಲ್ಲ, ನಿಖರ ಫಲಿತಾಂಶ ನೀಡಲಿ. ಇನ್ನೊಬ್ಬರ ಜೀವನದಲ್ಲಿ ಚೆಲ್ಲಾಟವಾಡದಂತೆ ಇಂತಹ ತಪ್ಪು ಮಾಹಿತಿಗೆ ಆರೋಗ್ಯ ಇಲಾಖೆಯು ಕಡಿವಾಣ ಹಾಕಲಿ.
-ಮುರುಗೇಶ ಡಿ., ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.