ADVERTISEMENT

ಅಂಬೇಡ್ಕರ್‌ ಕೊಡುಗೆ ಅರಿಯೋಣ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 21:13 IST
Last Updated 7 ಡಿಸೆಂಬರ್ 2021, 21:13 IST

ಅಂಬೇಡ್ಕರ್ ನಮ್ಮನ್ನು ಬಿಟ್ಪುಹೋಗಿ ಕೆಲವು ದಶಕಗಳೇ ಕಳೆದುಹೋಗಿವೆ. ಅವರು ಬಿತ್ತಿದ ದೂರದೃಷ್ಟಿಯ ಯೋಜನೆಯ ಬೀಜಗಳು ಇಂದಿಗೂ ಫಲ ನೀಡುತ್ತಿವೆ. ಅವುಗಳನ್ನು ಪ್ರತಿವರ್ಗದ ಜನರೂ ಅನುಭವಿಸುತ್ತಿದ್ದರೂ ಅಂಬೇಡ್ಕರ್ ಅವರು ಬರೀ ದಲಿತರ ಶ್ರೇಯೋಭಿವೃದ್ಧಿಗೆ ದುಡಿದು ಹೋಗಿದ್ದಾರೆ ಎಂಬಂತೆ ಕೆಲವರು ಬಾಲಿಶ ಭಾವನೆಗಳನ್ನು ಹೊಂದಿರುವುದು ಈ ದೇಶದ ದುರಂತ. ಒಬ್ಬ ಮಹಿಳೆ ತನ್ನ ಮಾತೃತ್ವದ ಹೆರಿಗೆಯ ರಜಾ ದಿನಗಳನ್ನು ಮಗುವಿನೊಂದಿಗೆ ಕಳೆಯಲು ಮೂರು ತಿಂಗಳವರೆಗೆ ಸಂಬಳಸಹಿತ ರಜೆ ನೀಡುವ ಕಾನೂನು ರೂಪಿಸುವಲ್ಲಿ ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದ್ದರು.

ಒಬ್ಬ ಮನುಷ್ಯ ದಿನದಲ್ಲಿ ಹನ್ನೆರಡು ಗಂಟೆ ಕರ್ತವ್ಯ ನಿರ್ವಹಿಸುವುದರಿಂದ ಇತರ ದಿನನಿತ್ಯದ ಕೆಲಸಗಳಿಗೆ ತೊಡಕು ಉಂಟಾಗುತ್ತದೆ ಎಂಬ ದೂರದೃಷ್ಟಿಯಿಂದ ಕರ್ತವ್ಯದ ವೇಳೆಯನ್ನು ಎಂಟು ಗಂಟೆಗಳಿಗೆ ಇಳಿಸುವಲ್ಲಿ ಸಫಲರಾದರು. ದೇಶದ ಅರ್ಥವ್ಯವಸ್ಥೆಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿದ್ದ ಅವರು, ತಮ್ಮ ‘ದಿ ಪ್ರಾಬ್ಲಮ್ ಆಫ್ ದಿ ರುಪಿ’ ಎಂಬ ಗ್ರಂಥದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ ಮತ್ತು ಪ್ರತೀ ಇಪ್ಪತ್ತು ವರ್ಷಗಳಿಗೊಮ್ಮೆ ನೋಟು ಅಮಾನ್ಯೀಕರಣದ ಬಗ್ಗೆ ಉಲ್ಲೇಖಿಸಿದ್ದಾರೆ.

ಹೀಗೆ ಅವರ ಸಾಧನೆಯ ಪಟ್ಟಿ ವಿಸ್ತಾರಗೊಳ್ಳುತ್ತಲೇ ಸಾಗುತ್ತದೆ. ಇಷ್ಟೆಲ್ಲಾ ದೂರದೃಷ್ಟಿಯ ಯೋಜನೆಗಳು ಕೇವಲ ದಲಿತರಿಗಾಗಿ ಮೀಸಲಾದವುಗಳೇ? ಅವರನ್ನು ಬರೀ ಮೀಸಲಾತಿಯ ನಾಯಕರನ್ನಾಗಿ ಮಾತ್ರ ನೋಡಿ, ಭಾರತದ ಇತಿಹಾಸದಲ್ಲಿ ಅವರಿಗೆ ಸಿಗಬೇಕಾದ ಸೂಕ್ತ ಸ್ಥಾನಮಾನಗಳು ಇಂದಿಗೂ ಸಿಗದಿರುವುದು ಅತ್ಯಂತ ನೋವಿನ ಸಂಗತಿ.

ADVERTISEMENT

- ಸುಜ್ಜಲೂರು ವಿಜಿ, ವಾಟಾಳು, ಟಿ.ನರಸೀಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.