ADVERTISEMENT

ವಾಚಕರ ವಾಣಿ: ಭೂಗಳ್ಳರ ಮೇಲೆ ಹದ್ದಿನ ಕಣ್ಣಿರಲಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 19:30 IST
Last Updated 15 ನವೆಂಬರ್ 2020, 19:30 IST

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು ₹ 100 ಕೋಟಿ ಬೆಲೆಬಾಳುವ 138 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿರುವುದನ್ನು ಪೊಲೀಸರು ಪತ್ತೆ ಹಚ್ಚಿ ನಾಲ್ವರನ್ನು ಬಂಧಿಸಿರುವುದು ವರದಿಯಾಗಿದೆ
(ಪ್ರ.ವಾ., ನ. 13). ಪೊಲೀಸರು ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳದೆ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ಮತ್ತಿತರ ನಗರಗಳ ಸುತ್ತಮುತ್ತಲಿನ ಜಮೀನಿಗೆ ಹೆಚ್ಚು ಬೆಲೆ ಬಂದಿರುವುದರಿಂದ, ಖಾಸಗಿ ಮತ್ತು ಸರ್ಕಾರಿ ಜಮೀನುಗಳನ್ನು ವಾಮಮಾರ್ಗಗಳ ಮೂಲಕ ಕಬಳಿಸಲು ಭೂಗಳ್ಳರು ಸದಾ ಹವಣಿಸುತ್ತಲೇ ಇರುತ್ತಾರೆ. ಅದರಿಂದ ತಾವೂ ಅಷ್ಟು ಲಾಭ ಗಳಿಸಲು ಸಂಬಂಧಿಸಿದ ಇಲಾಖೆಯ ಕೆಲ ನೌಕರರೂ ಅವರಿಗೆ ಸಹಕರಿಸುತ್ತಾರೆ.

ಬೆಳಕಿಗೆ ಬರುವ ಇಂತಹ ಅನೇಕ ಪ್ರಕರಣಗಳು ಸುದ್ದಿ ಮಾಡಿದಷ್ಟೇ ವೇಗವಾಗಿ ಹಿನ್ನೆಲೆಗೆ ಸರಿದುಬಿಡು
ತ್ತವೆ. ಅದಾಗಬಾರದು. ಸರ್ಕಾರ ಮತ್ತು ನಿಜವಾದ ಮಾಲೀಕರ ಜಮೀನು ಭೂಗಳ್ಳರ ಪಾಲಾಗುವುದನ್ನು ಮತ್ತು ಇದರಿಂದ ಸರ್ಕಾರ ಮತ್ತು ಜಮೀನು ಮಾಲೀಕರು ಅನವಶ್ಯಕವಾಗಿ ನ್ಯಾಯಾಲಯದ ಮೆಟ್ಟಿಲೇರುವುದನ್ನು ತಪ್ಪಿಸಲು, ಸಂಬಂಧಿಸಿದ ಎಲ್ಲ ಇಲಾಖೆಗಳ ಗ್ರಾಮ, ಹೋಬಳಿ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿ-ನೌಕರರ ಮೇಲೆ ಮೇಲಧಿಕಾರಿಗಳು ಹದ್ದಿನ ಕಣ್ಣಿಡಬೇಕು. ಈಗಾಗಲೇ ಮುದ್ರಾಂಕ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ‘ಕಾವೇರಿ’ ತಂತ್ರಾಂಶದಲ್ಲಿ ಸ್ವತ್ತಿನ ಮಾಲೀಕರ ಮತ್ತು ಸ್ವತ್ತಿನ ಭಾವಚಿತ್ರ, ಚೆಕ್ಕುಬಂದಿ, ಡಿಜಿಟಲ್ ಸಹಿ ಮತ್ತು ಬಾರ್‌ಕೋಡ್‌ಗಳು ಲಭ್ಯವಿರುವುದರಿಂದ, ಅದನ್ನು ಸದ್ಬಳಕೆ ಮಾಡಿಕೊಂಡು ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು.

-ಪುಟ್ಟೇಗೌಡ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.