ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್ಒಯು) ಇತಿಹಾಸವನ್ನು ಒಳಗೊಂಡ ಬಿ.ಎ. ಪದವಿಗಾಗಿ 2015ರಲ್ಲಿ ಪ್ರವೇಶಾತಿಯನ್ನು ಪಡೆದಿದ್ದೆ. ಎರಡು ವರ್ಷಗಳ ಡಿಗ್ರಿಯನ್ನು ಮುಗಿಸಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದೆ. ಆದರೆ, ಮೂರನೇ ವರ್ಷವಾಗುವಾಗ ಕೆಎಸ್ಒಯು ಮಾನ್ಯತೆಯನ್ನು ಯುಜಿಸಿ ರದ್ದುಗೊಳಿಸಿತ್ತು. ತದನಂತರ, ಕಲಿಯಲೇಬೇಕೆಂಬ ಉತ್ಕಟೇಚ್ಛೆಯಿಂದ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದ ದೂರಶಿಕ್ಷಣ ಕೋರ್ಸ್ಗೆ ಸೇರ್ಪಡೆಯಾಗಿ ಮೂರು ವರ್ಷಗಳ ಡಿಗ್ರಿ ಪೂರೈಸಿದೆ. ಅದಕ್ಕೆ ಸಂಬಂಧಿಸಿದ ಎಲ್ಲ ಪ್ರಮಾಣಪತ್ರಗಳನ್ನೂ ಪಡೆದುಕೊಂಡೆ. ಆದರೆ, ಇದೀಗ ಈ ವಿಶ್ವವಿದ್ಯಾಲಯದ ದೂರಶಿಕ್ಷಣ ಕಾರ್ಯಕ್ರಮಗಳನ್ನು ಯುಜಿಸಿ ರದ್ದು ಮಾಡಿದೆ.
ಈ ವಿಷಯ ತಿಳಿದು ತುಂಬಾ ಬೇಸರವಾಗಿದೆ. ಮೊದಲ ಬಾರಿ ಪದವಿ ಪೂರ್ತಿಗೊಳಿಸಲು ಸಾಧ್ಯವಾಗಲಿಲ್ಲ. ಎರಡನೇ ಬಾರಿ ಪೂರ್ತಿಗೊಳಿಸಿದರೂ ವಿಶ್ವವಿದ್ಯಾಲಯದ ಮಾನ್ಯತೆಯೇ ರದ್ದಾಗಿದೆ. ಇಂತಹ ವಿದ್ಯಮಾನಗಳಿಗೆ ಯುಜಿಸಿ ನಿಯಮಾವಳಿಗಳನ್ನು ಉಲ್ಲಂಘಿಸುವ ಆಯಾ ವಿಶ್ವವಿದ್ಯಾಲಯಗಳೇ ಹೊಣೆಯಾಗಿರುತ್ತವೆ. ದೂರಶಿಕ್ಷಣ ಪಡೆಯುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಮಾನ್ಯತೆ ಇಲ್ಲದಿದ್ದರೂ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ವಿಶ್ವವಿದ್ಯಾಲಯಗಳ ವಿರುದ್ಧ ಸರ್ಕಾರ ಇನ್ನಾದರೂ ಕಠಿಣ ಕ್ರಮ ಜರುಗಿಸಬೇಕು.
ಎಂ.ಎ.ಮುಜೀಬ್ ಅಹಮದ್,ಗುಂಡಿಕೆರೆ, ಕೊಡಗು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.