ಪಟಾಕಿ ತಯಾರಿಕೆ ಮತ್ತು ಮಾರಾಟದ ಮೇಲೆ ಪೂರ್ಣ ನಿಷೇಧ ಹೇರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪಟಾಕಿ ತಯಾರಕರು, ಮಾರಾಟಗಾರರು ಮತ್ತು ಬಳಕೆದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಈ ತೀರ್ಪು ನೀಡಿರುವುದೇನೋ ಸರಿ. ಆದರೆ, ಇಷ್ಟೆಲ್ಲ ಚಿಂತನ– ಮಂಥನದ ನಂತರವೂ ಸಮಸ್ಯೆ ಮಾತ್ರ ಜೀವಂತವಾಗಿ ಉಳಿಯಿತು.
ಪರಿಸರವನ್ನು ಹಾಳು ಮಾಡಿ, ವಾತಾವರಣವನ್ನು ‘ಅನಿಲ ಚೇಂಬರ್’ ಆಗಿ ಪರಿವರ್ತನೆ ಮಾಡುವುದರಲ್ಲಿ ಪಟಾಕಿಗಳ ಪಾಲು ಬಹು ದೊಡ್ಡದಿದೆ. ಹಠಾತ್ತನೆ ಪಟಾಕಿಗಳ ಮೇಲೆ ನಿಷೇಧ ಹೇರಿದರೆ ಈ ಉದ್ಯಮವನ್ನು ನಂಬಿರುವವರು ಬೀದಿಗೆ ಬರುತ್ತಾರೆ ಎಂಬುದೂ ನಿಜ. ಆದರೆ ಪಟಾಕಿಗಳ ಬೇಡಿಕೆ ಕಡಿಮೆಯಾದರೆ, ಆ ಉದ್ಯಮದಲ್ಲಿ ತೊಡಗಿರುವವರು ನಿಧಾನವಾಗಿ ತಾವೇ ಬೇರೆ ಉದ್ಯಮ
ದತ್ತ ವಲಸೆ ಹೋಗತೊಡಗುತ್ತಾರೆ. ಬೇಡಿಕೆ ಕಡಿಮೆಯಾಗಬೇಕಾದರೆ ಅದನ್ನು ಬಳಸುವ ಜನರು ಎಚ್ಚೆತ್ತುಕೊಳ್ಳಬೇಕು. ಪಟಾಕಿಗಳ ದುಷ್ಪರಿಣಾಮಗಳ ತೀವ್ರತೆಯನ್ನು ಜನರು ಅರ್ಥಮಾಡಿಕೊಂಡು ಪಟಾಕಿ ಸುಡುವುದನ್ನು ನಿಲ್ಲಿಸುವುದೊಂದೇ ಇದಕ್ಕಿರುವ ಮಾರ್ಗ.
ನೆನಪಿರಲಿ, ಹಿಟ್ಲರ್ನ ಗ್ಯಾಸ್ ಚೇಂಬರ್ಗಳು ಲಕ್ಷಾಂತರ ಜನರಿಗೆ ವಿಷಾನಿಲಗಳನ್ನು ಉಣಿಸಿ ಕೊಂದಿದ್ದವು. ನಾವೀಗ ಇಡೀ ಭೂಮಿಯ ವಾತಾವರಣವನ್ನು ಅನಿಲ ಚೇಂಬರ್ ಮಾಡುತ್ತಿದ್ದೇವೆ. ಇದರ ಪರಿಣಾಮಗಳನ್ನು ನಾವೇ ಊಹಿಸಬೇಕಿದೆ!
-ದರ್ಶನ್ ಕೆ.ಒ., ದೇವಿಕೆರೆ ಹೊಸೂರು, ತರೀಕೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.