ADVERTISEMENT

ಇದೂ ಧರ್ಮದ ದುರ್ಬಳಕೆಯೇ ಅಲ್ಲವೇ?

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:15 IST
Last Updated 20 ನವೆಂಬರ್ 2018, 20:15 IST
cartoon
cartoon   

ಕೇರಳ ವಿಧಾನಸಭೆಗೆ 2016ರಲ್ಲಿ ನಡೆದ ಚುನಾವಣೆಯಲ್ಲಿ ಮುಸ್ಲಿಂಲೀಗ್‌ ಅಭ್ಯರ್ಥಿ ಕೆ.ಎ. ಶಾಜಿ ಅವರು ಧರ್ಮದ ಹೆಸರನ್ನು ಬಳಸಿ ಮತ ಯಾಚಿಸಿದ್ದರು ಎಂದು ಸಾಬೀತಾಗಿದ್ದರಿಂದ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಧರ್ಮದ ದುರುಪಯೋಗ ಇತ್ತೀಚೆಗೆ ಭಾರತದಲ್ಲಿ ವ್ಯಾಪಕವಾಗಿ ಆಗುತ್ತಿದ್ದರೂ ಅದನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡುವುದು ಕಠಿಣವಾಗಿದ್ದರಿಂದ ಅಭ್ಯರ್ಥಿಗಳು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದರು. ನಮ್ಮ ದೇಶದ ಪ್ರಜಾತಂತ್ರವೇ ಅಪಾಯದಲ್ಲಿರುವ ಈ ಕಾಲ ಘಟ್ಟದಲ್ಲಿ ಕೇರಳ ಹೈಕೋರ್ಟ್‌ನ ಈ ತೀರ್ಪು ಉತ್ತಮ ಬೆಳವಣಿಗೆಯಾಗಿದೆ.

2018ರಲ್ಲಿ ನಮ್ಮ ರಾಜ್ಯದಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ಕೆಲವರು ಬಹಿರಂಗವಾಗಿ ಧರ್ಮದ ದುರುಪಯೋಗ ಮಾಡಿದ್ದರು. ಒಬ್ಬ ಅಭ್ಯರ್ಥಿ ಮನೆಮನೆಗೆ ಹೋಗಿ ‘ಹಿಂದೂ ಧರ್ಮ ಅಪಾಯದಲ್ಲಿದೆ’ ಎಂದು ಹೇಳಿ ಮತ ಯಾಚಿಸಿದ ವಿಡಿಯೊ ಚುನಾವಣೆಗೆ ಮುಂಚೆಯೇ ವೈರಲ್ ಆಗಿತ್ತು. ಧರ್ಮದ ಹೆಸರಲ್ಲಿ ಕರಪತ್ರಗಳ ಹಂಚಿಕೆಯೂ ಆಗಿತ್ತು. ‘ಈ ಚುನಾವಣೆ ಶ್ರೀರಾಮ ಮತ್ತು ಅಲ್ಲಾಹುವಿನ ನಡುವಿನ ಯುದ್ಧ’ ಎಂದು ಅಭ್ಯರ್ಥಿಯೊಬ್ಬರು ಹೇಳಿರುವ ವಿಡಿಯೊ ಒಂದು ಹರಿದಾಡಿತ್ತು. ಇಷ್ಟೇ ಅಲ್ಲ, ಮೀನು ತಿಂದು ದೇವಸ್ಥಾನಕ್ಕೆ ಹೋದ ವಿಚಾರ, ಉಡುಪಿಗೆ ಬಂದರೂ ಸ್ವಾಮೀಜಿಯನ್ನು ಭೇಟಿ ಮಾಡಿಲ್ಲ ಎಂಬ ವಿಚಾರ, ಮತದಾರರಿಂದ ಮಂಜುನಾಥನ ದೇವರ ಆಣೆ– ಪ್ರಮಾಣ ಮಾಡಿಸಿದ್ದು... ವರದಿಯಾಗಿವೆ. ಇವೆಲ್ಲವೂ ಧರ್ಮದ ದುರ್ಬಳಕೆ ತಾನೇ?

ಐದು ರಾಜ್ಯಗಳಲ್ಲಿ ಈಗ ನಡೆಯುತ್ತಿರುವ ಚುನಾವಣೆಯಲ್ಲೂ ಮಂದಿರ- ಮಸೀದಿ, ಗೋಮಾತಾ- ಗೋಮೂತ್ರ, ಸ್ಮಶಾನ- ಖಬರಿಸ್ತಾನ ಮುಂತಾದ ವಿಚಾರಗಳನ್ನು ಎಳೆದು ತರಲಾಗುತ್ತಿದೆ. ಇದು ವೋಟು ಪಡೆಯಲು ಮಾಡುತ್ತಿರುವ ಧರ್ಮದ ದುರುಪಯೋಗವೇ ಆಗಿದೆ! ಚುನಾವಣಾ ಆಯೋಗ ಈ ಬಗ್ಗೆ ಗಮನ ಹರಿಸುವುದೇ?ಅನಿಲ್ ಕುಮಾರ್ ಪೂಜಾರಿ, ಅಳಕೆ, ಮಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.