ADVERTISEMENT

ತಲೆದಂಡ ಅನಿರೀಕ್ಷಿತವಲ್ಲ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ಜುಲೈ 2021, 19:30 IST
Last Updated 26 ಜುಲೈ 2021, 19:30 IST

ಹಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಪದತ್ಯಾಗದ ವಿಚಾರ, ಕೊನೆಗೆ ಸೋಮವಾರ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಮೂಲಕ ಅಂತ್ಯಗೊಂಡಿದೆ. ಹೋರಾಟದ ಹಿನ್ನೆಲೆಯಿಂದ ಬಂದ ಯಡಿಯೂರಪ್ಪ ತಮ್ಮ ಪದತ್ಯಾಗದ ಮೂಲಕ ರಾಜಕಾರಣದ ಮುಸ್ಸಂಜೆಯಲ್ಲಿ ಮಹತ್ವದ ತಿರುವಿಗೆ ಕಾರಣರಾಗಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಎರಡರಷ್ಟಿದ್ದ ಶಾಸಕರ ಸಂಖ್ಯೆಯನ್ನು ಬಹುಮತದ ಸರ್ಕಾರದತ್ತ ತಂದಿದ್ದು ಅವರ ಹೆಗ್ಗಳಿಕೆ. ಹಲವು ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ ಹೆಚ್ಚು ಗುರುತಿಸಿಕೊಂಡಿದ್ದ ಅವರದು ರಾಜ್ಯ ರಾಜಕಾರಣ ಕಂಡ ಅಪರೂಪದ ವ್ಯಕ್ತಿತ್ವ. ಹೈಕಮಾಂಡ್ ನಿರ್ದೇಶನದಂತೆ ಮುಖ್ಯ ಮಂತ್ರಿ ಸ್ಥಾನ ತ್ಯಜಿಸಿರುವ ಯಡಿಯೂರಪ್ಪ ಅವರು ಅದಕ್ಕೂ ಮುನ್ನ ಭಾವುಕರಾಗಿ ಕಣ್ಣೀರು ಹಾಕಿರುವುದು, ಪದತ್ಯಾಗ ಅವರಿಗೆ ಇಷ್ಟವಿರಲಿಲ್ಲ ಎಂಬುದನ್ನು ತೋರಿಸುತ್ತದೆ. ಆದರೆ, ಬಿಜೆಪಿಯ ತತ್ವ-ಸಿದ್ಧಾಂತದ ಅನ್ವಯ 75 ವರ್ಷ ಮೇಲ್ಪಟ್ಟವರು ರಾಜಕೀಯನಿವೃತ್ತಿ ಪಡೆದುಕೊಳ್ಳಬೇಕೆಂಬುದರ ಆಧಾರದ ಮೇಲೆ ಅವರ ತಲೆದಂಡವಾಗುತ್ತಿರುವುದು ಅನಿರೀಕ್ಷಿತವೇನಲ್ಲ.

ರಾಜ್ಯ ರಾಜಕೀಯದಲ್ಲಿ ಗಣನೀಯ ಪ್ರಭಾವ ಹೊಂದಿರುವ ಲಿಂಗಾಯತ ಸಮುದಾಯದಿಂದ ಬಂದ ಯಡಿಯೂರಪ್ಪ ಅವರು, ತಮ್ಮದೇ ಆದ ವರ್ಚಸ್ಸನ್ನು ಗಳಿಸಿಕೊಂಡವರು. ಅವರ ಸ್ಥಾನವನ್ನು ತುಂಬುವ ಮತ್ತೊಬ್ಬ ರಾಜಕಾರಣಿ ರಾಜ್ಯ ಬಿಜೆಪಿಯಲ್ಲಿ ಇದ್ದಾರೆಯೇ ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತದೆ.

ADVERTISEMENT

- ಶ್ರೀಧರ್ ಡಿ. ರಾಮಚಂದ್ರಪ್ಪ,ತುರುವನೂರು, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.