ADVERTISEMENT

ವಾಚಕರ ವಾಣಿ: ಅನರ್ಹರ ಪತ್ತೆ ಅಭಿಯಾನ ಚುರುಕಾಗಲಿ

​ಪ್ರಜಾವಾಣಿ ವಾರ್ತೆ
Published 2 ಮೇ 2021, 20:00 IST
Last Updated 2 ಮೇ 2021, 20:00 IST

1.31 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿರುವ ಆಹಾರ ಇಲಾಖೆಯು ಮೇ ತಿಂಗಳಿನಿಂದ ಇವುಗಳಿಗೆ ಆಹಾರಧಾನ್ಯ ವಿತರಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ (ಪ್ರ.ವಾ., ಏ. 30). ಬಹುಪಾಲು ಸ್ಥಳೀಯ ಮಟ್ಟದ ರಾಜಕಾರಣಿಗಳು ಮತ್ತು ಅವರ ಹಿಂಬಾಲಕರು ತಮಗೆ ಬೇಕಾದವರಿಗೆ ಹಾಗೂ ತಮ್ಮ ವೋಟ್ ಬ್ಯಾಂಕಿನಲ್ಲಿ ಇರುವವರಿಗೆ ಸರ್ಕಾರಿ ಸೌಲಭ್ಯಗಳು ಕೈತಪ್ಪದಂತೆ ನೋಡಿಕೊಳ್ಳುವುದು ಮತ್ತು ಅವರಿಗೆ ಆಯಾ ಇಲಾಖೆಯ ಭ್ರಷ್ಟ ಸಿಬ್ಬಂದಿ ಸಾಥ್‌ ನೀಡುವುದು, ವಿವಿಧ ಯೋಜನೆಗಳ ಸೌಲಭ್ಯಗಳು ಅನರ್ಹರ ಪಾಲಾಗುವುದಕ್ಕೆ ಪ್ರಮುಖ ಕಾರಣ.

ವಿಳಂಬವಾದರೂ ಇಲಾಖೆಯ ಈ ಕ್ರಮ ಸ್ತುತ್ಯರ್ಹ. ಎಂದೋ ಆಗಬೇಕಾಗಿದ್ದ ಕೆಲಸ ಈಗಲಾದರೂ ಆಗುತ್ತಿದೆ
ಯಲ್ಲ ಎಂಬುದೇ ಸಮಾಧಾನಕರ ವಿಷಯ. ಪತ್ತೆ ಕಾರ್ಯ ಹೀಗೇ ಮುಂದುವರಿದರೆ, ಇನ್ನಷ್ಟು ದೊಡ್ಡ ಪ್ರಮಾಣ
ದಲ್ಲಿಯೇ ಪಡಿತರ ಚೀಟಿಗಳು ದೊರೆಯುವುದರಲ್ಲಿ ಸಂಶಯವಿಲ್ಲ. ಸಂಬಂಧಿಸಿದ ಎಲ್ಲ ಇಲಾಖೆಗಳಲ್ಲಿಯೂ ಸರ್ಕಾರಿ ಸೌಲಭ್ಯ ಪಡೆಯುತ್ತಿರುವ ಅನರ್ಹರನ್ನು ಪತ್ತೆ ಹಚ್ಚುವ ಅಭಿಯಾನವನ್ನೇ ಸಮರೋಪಾದಿಯಲ್ಲಿ ಕೈಗೊಂಡರೆ, ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುವುದನ್ನು ತಪ್ಪಿಸಿದಂತಾಗುತ್ತದೆ. ಜೊತೆಗೆ, ಸೌಲಭ್ಯ ಪಡೆದುಕೊಂಡ ಅನರ್ಹರು ಮತ್ತು ಅದಕ್ಕೆ ಕಾರಣರಾದ ಆಯಾ ಇಲಾಖೆಯ ಸಿಬ್ಬಂದಿಗೆ ಶಿಕ್ಷೆಯಾಗುವಂತೆ ನೋಡಿಕೊಂಡರೆ, ಇಂತಹ ಅಕ್ರಮಗಳಿಗೆ ಕಡಿವಾಣ ಬೀಳುತ್ತದೆ.

ತಿಪ್ಪೂರು ಪುಟ್ಟೇಗೌಡ,ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.