ADVERTISEMENT

ವಾಚಕರ ವಾಣಿ: ಅಮಾಯಕರ ಮೇಲೆ ದಾಳಿ: ಸಾಧಿಸುವುದೇನು?

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 22:00 IST
Last Updated 1 ಮಾರ್ಚ್ 2022, 22:00 IST

ಶಿವಮೊಗ್ಗದಲ್ಲಿ ಇತ್ತೀಚೆಗೆ ಕೋಮು ಗಲಭೆ ಆಯಿತು. ಮೃತನ ಅಂತ್ಯಕ್ರಿಯೆ ಸಂದರ್ಭದಲ್ಲಿ ಹಲವಾರು ಬಡ ಕುಟುಂಬಗಳ ಗುಡಿಸಲುಗಳ ಮೇಲೆ ಉದ್ರಿಕ್ತರು ದಾಳಿ ಮಾಡಿ, ನೀರು ಸಂಗ್ರಹಿಸುವ ಬ್ಯಾರೆಲ್‍ ಅನ್ನು, ಬಾಗಿಲನ್ನು ಒಡೆದುಹಾಕಿದರು. ಅವರ ದಿನಬಳಕೆಯ ವಸ್ತುಗಳನ್ನು ನಾಶಪಡಿಸಲಾಯಿತು. ಅವರೆಲ್ಲ ಮಾಧ್ಯಮದವರ ಮುಂದೆ ಹೇಳಿದ್ದು ‘ನಾವು ಬಡವರು, ಕೂಲಿ ಮಾಡಿ ಬದುಕುವವರು, ಒಂದು ಬ್ಯಾರೆಲ್ ಖರೀದಿಗೆ ಕನಿಷ್ಠ ಒಂದು ವರ್ಷವಾದರೂ ದುಡಿಯಬೇಕು. ನಮಗೆ ಈ ದೇವರು-ಧರ್ಮ-ಜಾತಿ ಯಾವ ಗೊಂದಲವೂ ಬೇಕಿಲ್ಲ. ನಮಗೆ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿದೆ’. ಇಂಥ ಅಮಾಯಕರ ಮೇಲೆ ದಾಳಿ ಮಾಡಿ ಸಾಧಿಸುವುದೇನಿದೆ? ಇಂಥ ದಾಳಿಗಳಿಂದ ಆರೋಪಿಗಳಿಗೆ ಶಿಕ್ಷೆಯೂ ಆಗುವುದಿಲ್ಲ. ಕೊಲೆಯಾದವರ ಪ್ರಾಣ ಮರಳಿ ಬರುವುದೂ ಇಲ್ಲ. ಕೇವಲ ಸಮುದಾಯಗಳ ಮಧ್ಯೆ ದ್ವೇಷ ಹೆಪ್ಪುಗಟ್ಟುತ್ತದೆ. ಸಂಬಂಧವಿಲ್ಲದ ಯಾರ‍್ಯಾರೋ ಸಂಕಷ್ಟಕ್ಕೀಡಾಗಿ ನರಳುತ್ತಾರೆ, ಅಸಹಾಯಕತೆಯಿಂದ ಶಪಿಸುತ್ತಾರೆ.

ಏಳು ವರ್ಷಗಳ ಹಿಂದೆ ಇದೇ ರೀತಿ ಕೊಲೆಯಾಗಿದ್ದ ವಿಶ್ವನಾಥ ಶೆಟ್ಟಿ ಅವರ ತಾಯಿ ಮುರುಕಲು ಗುಡಿಸಲಿನಲ್ಲಿ, ಕಾಲಿಗೆ ಚಪ್ಪಲಿ ಇಲ್ಲದೆ ಬದುಕು ಸವೆಸುತ್ತಿರುವ ಸುದ್ದಿ ಅರಿತು, ಮುಸ್ಲಿಂ ಸಮುದಾಯದ ಯುವಕರು ಆ ತಾಯಿಯ ಮನೆಯನ್ನು ಸ್ವಚ್ಛಗೊಳಿಸಿದ ವರದಿ (ಪ್ರ.ವಾ., ಮಾರ್ಚ್ 1) ಮನಸ್ಸಿಗೆ ತುಸು ನೆಮ್ಮದಿ ನೀಡುವಂತಿದೆ. ಸಾವು ಕೂಡ ರಾಜಕೀಯಕ್ಕೆ ಬಳಕೆಯಾಗುವ ದುಃಸ್ಥಿತಿ ನಮ್ಮ ದೇಶಕ್ಕೆ ಬರಬಾರದಿತ್ತು. ಮಾನವೀಯತೆಯನ್ನೇ ಮರೆಯುತ್ತಿರುವ ಕೋಮು ಗಲಭೆಗಳಿಗೆ ಯಾರು ಕಡಿವಾಣ ಹಾಕಬೇಕು?

ಚನ್ನು ಅ. ಹಿರೇಮಠ,ರಾಣೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.