‘ಸೇವೆಗಳು ಹೆಚ್ಚು ಜನಸ್ನೇಹಿಯಾಗಬೇಕಾಗಿದೆ’ ಎಂಬ ಅಭಿಪ್ರಾಯವುಳ್ಳ ಸಂಪಾದಕೀಯಕ್ಕೆ (ಪ್ರ.ವಾ., ಅ. 29 ) ಪೂರಕವಾಗಿ ಇತ್ತೀಚಿನ ಎರಡು ಭೇಟಿಗಳ ಆಧಾರದ ಮೇಲೆ ಕೆಲವು ಅಂಶ ಸೇರಿಸಬೇಕಾಗಿದೆ. ‘ಆನ್ಲೈನ್ ಅರ್ಜಿ ಕಡ್ಡಾಯ’ ಎಂದಾಗ ಹಲವರು ಅಪ್ಲೋಡ್ ಮಾಡಲು ಕಂಪ್ಯೂಟರ್ ಆಪರೇಟರ್ಗಳನ್ನು ಅವಲಂಬಿಸಬೇಕಾಗುತ್ತದೆ. ಒಟಿಪಿ ಸಿಕ್ಕಾಗ ಅದು ಸ್ಮಾರ್ಟ್ಫೋನ್ ಅಲ್ಲದಿದ್ದರೆ ಅಪಾಯಿಂಟ್ಮೆಂಟ್ ಸಿಗುವುದು ಕಷ್ಟ (ಮೂರು ಒಟಿಪಿ ಸಿಕ್ಕರೂ ನಿರರ್ಥಕವಾಗಿ, ಮುಂದಿನ ಕೆಲಸದ ದಿನ ಮತ್ತೆ ಹೋಗಬೇಕಾಯಿತು). ಡಿಎಲ್ ನವೀಕರಣ ಒಂದು ಸಾಮಾನ್ಯ ಪ್ರಕ್ರಿಯೆ, ವಿಳಾಸ ಬದಲಾಗಿದ್ದರೂ. ಹಣ ಕಟ್ಟಿಸಿಕೊಳ್ಳಲು ವ್ಯವಹಾರದ ಸಮಯದಲ್ಲಿ ಮತ್ತೆ ಒಳಮಿತಿ ಮಾಡಬಾರದು. ಮೆಡಿಕಲ್ ಸರ್ಟಿಫಿಕೇಟ್ ಸರ್ಕಾರಿ ವೈದ್ಯರಿಂದಲೇ ಪಡೆಯಬೇಕಂತೆ (‘ಫೀ’ ಕೊಟ್ಟರೆ ಅರ್ಜಿದಾರನನ್ನು ನೋಡದೆಯೇ ಖಾಲಿ ಫಾರ್ಮ್ಗೆ ಸೀಲ್, ಸಹಿ ಮಾಡುವವರೂ ಇದ್ದಾರೆ!)
ಡ್ರೈವಿಂಗ್ ಸ್ಕೂಲ್ಗಳು ಇನ್ನೂ ಹತೋಟಿ ಇಟ್ಟುಕೊಂಡಿವೆ (ಅರ್ಜಿದಾರ ವೈಯಕ್ತಿಕವಾಗಿ ಸಲ್ಲಿಸಿದ್ದರೂ, ಪರವಾನಗಿ ಸಿದ್ಧವಾದಾಗ ಅದನ್ನು ಸಂಗ್ರಹಿಸಿ ಅವನಿಂದ ಹೆಚ್ಚುವರಿ ಹಣ ವಸೂಲಿ ಮಾಡಬಹುದು). ಒಂದು ಭೇಟಿಯಲ್ಲಿ ಎಲ್ಲ ಪ್ರಕ್ರಿಯೆ ಮುಗಿದರೆ ಉತ್ತಮ. ಡಾಕ್ಟರ್ 11.30ಕ್ಕೆ ಬರುವುದು, ಹಣ ಮಧ್ಯಾಹ್ನ 2.30ರ ನಂತರವೇ ಕಟ್ಟಿಸಿಕೊಳ್ಳುವುದು, ಫೋಟೊ ಇತ್ಯಾದಿ 3.30ರ ನಂತರ, ಇದೆಲ್ಲ ಹಿರಿಯ ನಾಗರಿಕರಿಗೆ ಹೆಚ್ಚು ಕಷ್ಟ (‘ಎಕ್ಸ್ಟ್ರಾ’ ಕೊಟ್ಟರೆ ಸಡಿಲಿಕೆ ಸಂಭವ).
ಒಟ್ಟಾರೆ, ತಂತ್ರಜ್ಞಾನದಿಂದಷ್ಟೇ ಸುಧಾರಣೆ ಆಗದು, ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಬೇಕು. ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಆರ್ಟಿಒ ಬಂದ್ ಮಾಡಿ, ಖಾಸಗಿಯವರಿಗೆ ಕೊಡಲು ಯೋಚಿಸಿದ್ದರು. ಈಗಿರುವ ಶುಲ್ಕ ಎಷ್ಟು ಹೆಚ್ಚಾಗುತ್ತಿತ್ತೊ?
-ಎಚ್.ಎಸ್.ಮಂಜುನಾಥ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.