ಮದುವೆ ಮಾಡುವುದೆಂದರೆ ಅಳೆದೂತೂಗಿ ಮುಹೂರ್ತ ನಿರ್ಧರಿಸಲಾಗುತ್ತದೆ. ಹೆಚ್ಚಿನ ಮದುವೆಗಳು ಹಗಲಿನಲ್ಲಿ ನಡೆಯುತ್ತವೆ. ಆದರೆ ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಮಧ್ಯರಾತ್ರಿ ಅಥವಾ ಬೆಳಗಿನ ಜಾವ ಕತ್ತಲಲ್ಲಿ ವಧುವಿನ ಕೊರಳಿಗೆ ತಾಳಿ ಕಟ್ಟಿ ಸಾಗಹಾಕುವ ಕೆಲಸ ನಡೆಯುತ್ತಿದೆ. ಕಾರಣ ಇಷ್ಟೆ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಈ ಭಾಗದಲ್ಲಿ ಬಹಳಷ್ಟು ಜಾತ್ರೆಗಳಲ್ಲಿ ಸಾಮೂಹಿಕ ಮದುವೆಗಳನ್ನು ನಡೆಸಲಾಗುತ್ತದೆ. ಅಪ್ರಾಪ್ತ ವಯಸ್ಕರ ಮದುವೆ ತಡೆಗಟ್ಟುವ ದಿಸೆಯಲ್ಲಿ ನಿರ್ಬಂಧಗಳಿವೆ. ಸರ್ಕಾರ ಚಾಪೆ ಕೆಳಗೆ ನುಸುಳಿದರೆ ರಂಗೋಲಿ ಕೆಳಗೆ ನುಸುಳುವ ಕೆಲ ಪಾಲಕರು, ಬೆಳಗಾಗುವುದರೊಳಗೆ ಅಪ್ರಾಪ್ತ ವಯಸ್ಕ ಮಕ್ಕಳ ‘ಮದುವೆ ಶಾಸ್ತ್ರ’ ಮುಗಿಸುತ್ತಿರುವ ಪ್ರಕರಣಗಳಿಗೂ ಕೊರತೆ ಇಲ್ಲ.
ಹಣ ಪಡೆದು ತಾಳಿ, ವಧುವರರ ಬಟ್ಟೆಗಳನ್ನು ಮನೆಗೆ ಕಳಿಸಿಕೊಡುವ ಜಾತ್ರಾ ಸಮಿತಿಗಳ ಪರೋಕ್ಷ ಸಮ್ಮತಿ ಇರುವುದನ್ನೂ ಇಲ್ಲಿ ತಳ್ಳಿಹಾಕುವಂತಿಲ್ಲ. ಗುರು ಹಿರಿಯರ ಸಾನ್ನಿಧ್ಯ, ಬಂಧು ಬಾಂಧವರ ಸಮ್ಮುಖದಲ್ಲಿ ಅವರ ಆಶೀರ್ವಾದದೊಂದಿಗೆ ದಾಂಪತ್ಯ ಬದುಕಿಗೆ ಕಾಲಿಡಬೇಕಾದ ಮಕ್ಕಳ ಕತ್ತಿಗೆ ಕತ್ತಲಲ್ಲಿ ತಾಳಿ ಕಟ್ಟಿ, ಅವರ ವೈಯಕ್ತಿಕ ಬದುಕನ್ನು ಕತ್ತಲೆಗೆ ದೂಡಲಾಗುತ್ತಿದೆ. ಇಂತಹ ಕೃತ್ಯಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕಿದೆ.
–ನಾರಾಯಣರಾವ ಕುಲಕರ್ಣಿ, ಹಿರೇಅರಳಿಹಳ್ಳಿ, ಯಲಬುರ್ಗಾ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.