ADVERTISEMENT

ವಾಚಕರ ವಾಣಿ | ಬೆಂಗಳೂರಿಗೆ ಮರುವಲಸೆ; ಚಿಂತನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 19:30 IST
Last Updated 3 ಜುಲೈ 2020, 19:30 IST
ಲಾಕ್‌ಡೌನ್‌ನಿಂದಾಗಿ ಊರಿಗೆ ಹೋಗಿದ್ದ ಕಾರ್ಮಿಕರು ನಗರಗಳಿಗೆ ಮರಳುತ್ತಿದ್ದಾರೆ
ಲಾಕ್‌ಡೌನ್‌ನಿಂದಾಗಿ ಊರಿಗೆ ಹೋಗಿದ್ದ ಕಾರ್ಮಿಕರು ನಗರಗಳಿಗೆ ಮರಳುತ್ತಿದ್ದಾರೆ   

ರಾಜ್ಯದ ಪ್ರಮುಖ ನಗರಗಳಿಗೆ, ಅದರಲ್ಲೂ ಮುಖ್ಯವಾಗಿ ಬೆಂಗಳೂರಿಗೆ ಹೊರ ರಾಜ್ಯಗಳ ಸಾವಿರಾರು ಕೆಲಸಗಾರರು ಮರಳುತ್ತಿದ್ದು, ಇನ್ನೆರಡು ವಾರಗಳ ಕಾಲ ಎಲ್ಲ ರೈಲುಗಳ ಸೀಟುಗಳು ಭರ್ತಿಯಾಗಿವೆ ಎಂದು ವರದಿಯಾಗಿದೆ. ಸರ್ಕಾರ ಕೆಳಕಂಡ ಕೆಲವು ಕಾರಣಗಳಿಗಾಗಿ ಈ ಬೆಳವಣಿಗೆಗೆ ಸದ್ಯಕ್ಕೆ ತಡೆ ಒಡ್ಡುವುದು ಒಳ್ಳೆಯದು.

ಬೆಂಗಳೂರಿನಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಸರ್ಕಾರಿ ಯಂತ್ರವು ಬಸವಳಿದು ಹೋಗಿದೆ. ಬರಲಿರುವ ವಲಸಿಗರನ್ನೆಲ್ಲಾ ಕೊರೊನಾ ಪರೀಕ್ಷೆಗೆ ಒಳಪಡಿಸುವುದು ಅಥವಾ ಸೋಂಕು ಕಂಡುಬಂದಲ್ಲಿ ಅವರನ್ನೆಲ್ಲ ಕ್ವಾರಂಟೈನ್ ಮಾಡುವುದು, ಚಿಕಿತ್ಸೆ ನೀಡುವುದು ಇದ್ಯಾವುದಕ್ಕೂ ಸ್ಥಳವಾಗಲೀ ಜನಬಲವಾಗಲೀ ಇತರ ಸಂಪನ್ಮೂಲಗಳಾಗಲೀ ಇದ್ದಂತಿಲ್ಲ. ಜುಲೈ ತಿಂಗಳಿನಲ್ಲಿ ಸೋಂಕು ಇನ್ನೂ ವಿಪರೀತಕ್ಕೆ ಹೋದರೆ ಭಾಗಶಃ ಲಾಕ್‌ಡೌನ್ ಮಾಡಬೇಕಾದ ಸಾಧ್ಯತೆ ಇರುವಾಗ, ಈ ವಲಸಿಗರೆಲ್ಲರಿಗೂ ಕೆಲಸ ಇಲ್ಲದೆ ಮತ್ತೆ ಸರ್ಕಾರವೇ ಅವರನ್ನು ಸಾಕುವಂತಾದರೆ ಉಪಯೋಗವೇನು?

ನೂರಾರು ಮೈಲಿಗಳ ದೂರ ಇತರ ಪ್ರಯಾಣಿಕರೊಂದಿಗೆ ದಿನಗಟ್ಟಲೆ ರೈಲಿನಲ್ಲಿ ಬರುವವರಿಗೆ, ಹತ್ತುವಾಗ ಇಲ್ಲದ ಸೋಂಕು ಇಳಿಯುವಾಗ ಹಬ್ಬಿದ್ದರೆ ಅಚ್ಚರಿ ಪಡಬೇಕಿಲ್ಲ. ಹಾಗಾಗಿಯೂ ಕೆಲಸಗಾರರ ಅಗತ್ಯ ಹೆಚ್ಚಾದರೆ, ಕರ್ನಾಟಕದಲ್ಲೇ ಸ್ವಂತ ಊರುಗಳಿಗೆ ಮರಳಿರುವ ಕಾರ್ಮಿಕರನ್ನು ಕರೆಸಿಕೊಳ್ಳಬಹುದು. ಊರಿಗೆ ಮರಳುವ ಸಂದರ್ಭದಲ್ಲಿ ಅವರ ಹೆಸರು, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಸರ್ಕಾರ ಸಂಗ್ರಹಿಸಿರುವುದರಿಂದ ಈ ಕಾರ್ಯ ಕಷ್ಟವೇನೂ ಆಗದು. ಅಲ್ಲದೆ ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ರಾಜ್ಯದವರನ್ನು ನಿಭಾಯಿಸುವುದು ಸರ್ಕಾರಕ್ಕೆ ಹೆಚ್ಚು ಸುಲಭವಾಗುತ್ತದೆ.

-ನರೇಂದ್ರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.