ADVERTISEMENT

ಶಾಸಕರು ವಿಷ ಕುಡಿಯಬೇಕಾ? | ಒಂದೇ ಪ್ರಶ್ನೆಯಲ್ಲಿ ಹಲವು ಉತ್ತರ!

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 20:00 IST
Last Updated 2 ಆಗಸ್ಟ್ 2019, 20:00 IST

‘ಎಲ್ಲಾ ನಿಮಗೇ ಕೊಟ್ಟರೆ ರಾಜೀನಾಮೆ ಕೊಟ್ಟಿರುವ ಶಾಸಕರು ವಿಷ ಕುಡಿಯಬೇಕಾ?’ ಎಂದು ಮಂತ್ರಿಗಿರಿಗೆ ಲಾಬಿ ಮಾಡಲು ಬಂದ ಸ್ವಜಾತಿ ಬಾಂಧವರನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಛೇಡಿಸಿದರೆಂದು ಪತ್ರಿಕೆಯಲ್ಲಿ ವರದಿಯಾಗಿದೆ. ಮುಖ್ಯಮಂತ್ರಿಯವರ ಈ ಪ್ರಶ್ನೆ, ವಿಧಾನಸಭಾಧ್ಯಕ್ಷರಾಗಿದ್ದ ರಮೇಶ್‌ ಕುಮಾರ್ ಅವರು ರಾಜೀನಾಮೆ ಕೊಟ್ಟ ಶಾಸಕರ ವಿರುದ್ಧ ತೆಗೆದುಕೊಂಡ ದಂಡನಾಕ್ರಮವನ್ನು ಎತ್ತಿ ಹಿಡಿಯುವಂತಿದೆ. ಅನರ್ಹ ಶಾಸಕರ ಬಗ್ಗೆ ಬಿಜೆಪಿ ನಾಯಕರು ವ್ಯಕ್ತಪಡಿಸಿದ ಅಪರಿಮಿತ, ಅನಗತ್ಯ ಅನುಕಂಪದ ಗುಟ್ಟೂ ಇದೇ ಪ್ರಶ್ನೆಯಿಂದ ರಟ್ಟಾಗಿದೆ. ತಾವು ಯಾರ ಒತ್ತಡಕ್ಕೂ ಒಳಗಾಗಿಲ್ಲ, ತಮಗೆ ಯಾರೂ ಆಸೆ-ಆಮಿಷಗಳನ್ನು ಒಡ್ಡಿಲ್ಲ ಎಂಬ ಅನರ್ಹ ಶಾಸಕರ ನುಡಿಮುತ್ತುಗಳಲ್ಲಿನ ‘ಸತ್ಯಾಂಶ’ದ ಮೇಲೂ ಬೆಳಕು ಚೆಲ್ಲುತ್ತದೆ. ಮಾತ್ರವಲ್ಲ, ರಾಜ್ಯಪಾಲರು ಎರಡನೇ ಬಾರಿ ಯಡಿಯೂರಪ್ಪನವರನ್ನು ಸರ್ಕಾರ ರಚಿಸಲು ಆಮಂತ್ರಿಸಿದ ಕ್ರಮದ ಬಗೆಗಿನ ಸಂದೇಹಗಳನ್ನು ಪುಷ್ಟೀಕರಿ
ಸುತ್ತದೆ. ಸತ್ಯವೇ ಹಾಗೆ. ಒಮ್ಮೆ ಹೊಳೆದರೆ ಎಲ್ಲದರ ಮೇಲೂ ಬೆಳಕನ್ನು ಬೀರಿ ಸ್ಪಷ್ಟೀಕರಿಸುತ್ತದೆ. ಆದರೆ ನಾವು ಮಾತ್ರ ರಾಜಕಾರಣಿಗಳನ್ನು ಸತ್ಯದ ಬೆಳಕಿನಲ್ಲಿ ನೋಡುವುದೇ ಇಲ್ಲ, ಪಕ್ಷದ ನೆಲೆಗಟ್ಟಿನಲ್ಲಿ ನೋಡುವುದೇ ಹೆಚ್ಚು. ಆದ್ದರಿಂದಲೇ ರಮೇಶ್‌ ಕುಮಾರ್‌ ಅವರ ಅಂದಿನ ಕಠಿಣ ನಿಲುವು ಬಿಜೆಪಿಯವರ ಪಾಲಿಗೆ ಘೋರ ಅಪರಾಧದಂತೆ ಕಂಡಿತು. ದಿಢೀರನೆ ರಾಜೀನಾಮೆಯಿತ್ತು ಒಂದು ಪಕ್ಷದ ಸರ್ಕಾರವನ್ನು ಕೆಡವಿ, ಮತ್ತೊಂದು ಪಕ್ಷಕ್ಕೆ ಹಾರಿ, ಆ ಪಕ್ಷದಿಂದ ಗೆದ್ದು, ಆ ಪಕ್ಷದ ಸರ್ಕಾರದಲ್ಲಿ ಮಂತ್ರಿಯಾಗುವ ಕೆಟ್ಟ ಪದ್ಧತಿಗೆ ರಮೇಶ್‌ ಕುಮಾರ್‌ ಅವರ ತೀರ್ಪು ಕೊಡಲಿಪೆಟ್ಟಾಗಲಿದೆ ಎಂದು ಭಾವಿಸುವುದರ ಬದಲು, ಹುಳುಕು ಹುಡುಕಿದ್ದೇ ಹೆಚ್ಚಾಯಿತು.

ರೇಚಂಬಳ್ಳಿ ದುಂಡಮಾದಯ್ಯ, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT