ADVERTISEMENT

ಹಣ ದೋಚುವ ತಂತ್ರಗಾರಿಕೆಯೇ?

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 19:30 IST
Last Updated 29 ಮಾರ್ಚ್ 2021, 19:30 IST

ರಾಜ್ಯದ 17 ನದಿಗಳು ಕಲುಷಿತವಾಗಿದ್ದು ದೇಶದಾದ್ಯಂತ ಇದೇ ಬಗೆಯಲ್ಲಿ 300ಕ್ಕೂ ಹೆಚ್ಚು ನದಿಗಳು ಕಲುಷಿತವಾಗಲು ಒಳಚರಂಡಿ ಮತ್ತು ಕೈಗಾರಿಕೆ ತ್ಯಾಜ್ಯ ಕಾರಣ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ತಿಳಿಸಿದೆ.

ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಹೇಳಿರುವಂತೆ, ನಾವು ಎಂತಹ ಪ್ರಜಾಪ್ರಭುತ್ವ ಮತ್ತು ಅಧಿಕಾರಿಗಳನ್ನು ಸೃಷ್ಟಿಸಿದ್ದೇವೆ ಎಂದರೆ, ಎಂತಹ ಭೀಕರ ಅನಾಹುತವಾದರೂ (ನದಿ ಮಾಲಿನ್ಯ) ಅವರು ಅದರ ಲಾಭ ಪಡೆಯುತ್ತಾರೆ. ನದಿ ಮಾಲಿನ್ಯ ಮಾಡಲು ಒಳಚರಂಡಿ ಎಂಬ ರಾಕ್ಷಸನನ್ನು ಸೃಷ್ಟಿಸಿ ನಿರಂತರವಾಗಿ ಕೋಟ್ಯಂತರ ರೂಪಾಯಿ ದೋಚುತ್ತಾರೆ. ನದಿ ನೀರಿನ ಮಾಲಿನ್ಯ ತೊಳೆಯಲು ಇನ್ನೊಬ್ಬ ರಾಕ್ಷಸನಿಂದ ಕೋಟ್ಯಂತರ ರೂಪಾಯಿ ಲೂಟಿಯಾಗುತ್ತದೆ.

ಕೋಟ್ಯಂತರ ಜನರ ಮಲ– ಮೂತ್ರ, ಕಾರ್ಖಾನೆ ತ್ಯಾಜ್ಯದಿಂದ ಮಲಿನವಾದ ನದಿಗಳ ನೀರನ್ನು ಜನರು ಬಳಕೆ ಮಾಡುತ್ತಿರುವುದು ಶೋಚನೀಯ. ದೇಶದಲ್ಲಿರುವ ಸಾವಿರಾರು ಬುದ್ಧಿಜೀವಿಗಳು ಹಾಗೂ ವಿಜ್ಞಾನಿಗಳಿಗೆ ನದಿ ಮಾಲಿನ್ಯಕ್ಕೆ ಪರಿಹಾರ ತಿಳಿದಿಲ್ಲವೇ? ಒಳಚರಂಡಿಗೆ ಪರ್ಯಾಯ ಸಂಶೋಧನೆ ಮಾಡಿಲ್ಲವೇ? ಉಚಿತ ಜಲಮೂಲಗಳನ್ನು ಮಲಿನ ಮಾಡಿ ನೀರಿಗೆ ಹಾಹಾಕಾರ ಸೃಷ್ಟಿಸಿ ಹಣ ದೋಚುವ ತಂತ್ರಗಾರಿಕೆಯೇ?

ADVERTISEMENT

ಮಹಾತ್ಮ ಗಾಂಧಿ ಅವರ ಸಲಹೆಯಂತೆ, ಮನೆಗೆ ಎರಡು ಇಂಗು ಗುಂಡಿಗಳ ವ್ಯವಸ್ಥೆ ಮಾಡಿ, ಅದರಲ್ಲಿ ಬರುವ ಮಲ– ಮೂತ್ರವನ್ನು ಜೈವಿಕ ಅನಿಲ ಯಂತ್ರಕ್ಕೆ ಸೇರಿಸಿ ಉಚಿತ ಇಂಧನ ಪಡೆದು, ನಂತರ ಇಂಗು ಗುಂಡಿಗೆ ಸೇರಿಸಿದರೆ ಅಮೂಲ್ಯವಾದ ಸಾವಯವ ಗೊಬ್ಬರ ದೊರೆತು, ನದಿ ಮಾಲಿನ್ಯವನ್ನು ಅದು ತಡೆಯುತ್ತದೆ.

ಡಾ. ಎಚ್.ಆರ್‌.ಪ್ರಕಾಶ್, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.