ರೈಲು ಮತ್ತು ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ವೆಚ್ಚದಲ್ಲಿ ರಿಯಾಯಿತಿ ನೀಡಲಾಗುತ್ತಿತ್ತು. ಇದು ಬಸ್ಸುಗಳಲ್ಲಿ ಈಗಲೂ ಮುಂದುವರಿದಿದೆ. ಆದರೆ ರೈಲ್ವೆ ಇಲಾಖೆಯು ಕೊರೊನಾ ಹೆಸರಿನಲ್ಲಿ ಈಗ ಈ ಸೌಲಭ್ಯವನ್ನು ಸ್ಥಗಿತಗೊಳಿಸಿದಂತಿದೆ. ಈ ಮೊದಲು ಆನ್ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವಾಗ 60 ವರ್ಷಕ್ಕಿಂತ ಮೇಲಿನ ವಯಸ್ಸು ದಾಖಲಿಸುತ್ತಿದ್ದಂತೆ ರಿಯಾಯಿತಿ ತೋರಿಸಲಾಗುತ್ತಿತ್ತು. ನಂತರ ಅದರಲ್ಲಿ ಬದಲಾವಣೆ ಮಾಡಿ ‘ಹಿರಿಯ ನಾಗರಿಕರ ರಿಯಾಯಿತಿಯನ್ನು ಬಯಸುತ್ತೀರಾ’ ಎಂಬ ಪ್ರಶ್ನೆಯನ್ನು ಸೇರಿಸಲಾಯಿತು. ‘ಹೌದು’ ಎಂದು ನಮೂದಿಸಿದವರಿಗೆ ಮಾತ್ರ ದರದಲ್ಲಿ ರಿಯಾಯಿತಿ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಆನ್ಲೈನ್ ಮೂಲಕ ಕಾಯ್ದಿರಿಸಹೊರಟರೆ ರಿಯಾಯಿತಿ ಎಂಬ ಪದವನ್ನೇ ತೆಗೆಯಲಾಗಿದೆ. ರೈಲು ನಿಲ್ದಾಣಕ್ಕೆ ಹೋಗಿ ಕಾಯ್ದಿರಿಸಿದರೆ ಮಾತ್ರ ರಿಯಾಯಿತಿ ಎಂದು ತೋರಿಸುತ್ತದೆ.
ವಾಸ್ತವ ಎಂದರೆ ರೈಲು ನಿಲ್ದಾಣಕ್ಕೆ ಹೋಗಿ ವಿಚಾರಿಸಿದರೂ ‘ಕೊರೊನಾ ಕಾರಣಕ್ಕೆ ಹಿರಿಯ ನಾಗರಿಕರ ರಿಯಾಯಿತಿ ತೆಗೆಯಲಾಗಿದೆ, ಹಾಗಾಗಿ ಅವರು ಪೂರ್ಣ ವೆಚ್ಚವನ್ನು ಪಾವತಿಸಿ ಕಾಯ್ದಿರಿಸಬೇಕು’ ಎಂಬ ಉತ್ತರ ಬಂದಿದೆ. ‘ರಿಯಾಯಿತಿ ತೆಗೆದಿದ್ದೀರಾ’ ಎಂದು ಪ್ರಶ್ನಿಸಿದರೆ, ‘ಸದ್ಯಕ್ಕೆ ಇಲ್ಲ, ಮುಂದೆ ಬದಲಾಗಬಹುದು’ ಎಂಬ ಉತ್ತರ ನೀಡುತ್ತಾರೆ. ಇದೆಲ್ಲದರ ಅರ್ಥವೆಂದರೆ, ಎಲ್ಲ ರೀತಿಯ ಸಬ್ಸಿಡಿ, ರಿಯಾಯಿತಿಗಳನ್ನು ತೆಗೆಯುವುದಾಗಿದೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ವಿಶೇಷವಾಗಿ ರಾಜ್ಯದ ಲೋಕಸಭಾ ಸದಸ್ಯರು ಹಾಗೂ ರಾಜ್ಯವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರು ಧ್ವನಿ ಎತ್ತಿ, ಹಿರಿಯ ನಾಗರಿಕರ ಹಕ್ಕುಗಳನ್ನು ಸಂರಕ್ಷಿಸಲು ಮುಂದಾಗಬೇಕಿದೆ.
-ಈ.ಬಸವರಾಜು, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.