ಓಲಾ, ಉಬರ್ ಟ್ಯಾಕ್ಸಿಗಳಿಂದ ಪ್ರಯಾಣಕ್ಕೆ ಅನುಕೂಲ ಆಗಿರುವುದು ನಿಜ. ಆದರೆ ಪ್ರಾರಂಭದಲ್ಲಿ ಸಾಮಾನ್ಯ ದರದಲ್ಲಿ ಸೇವೆ ನೀಡಿ ಎಲ್ಲರೂ ಈ ಸೇವೆಗೆ ಒಗ್ಗಿಕೊಳ್ಳುವಂತೆ ಮಾಡಿ, ಕಂಪನಿಗೆ ಸ್ಥಿರ ಮಾರುಕಟ್ಟೆ ನಿಕ್ಕಿಯಾಗುತ್ತಿದ್ದಂತೆ ಅವು ಪ್ರಯಾಣಿಕರ ಸುಲಿಗೆಗೆ ಇಳಿದಿವೆ. ಗರಿಷ್ಠ ವ್ಯವಹಾರದ ಸಮಯದಲ್ಲಿ ಬೇಡಿಕೆ ಜಾಸ್ತಿ ಇರುವ ಕಾರಣ ಜಾಸ್ತಿ ಹಣ ಪೀಕುವ ಈ ಕಂಪನಿಗಳು, ಕನಿಷ್ಠ ವ್ಯವಹಾರದ ಸಮಯದಲ್ಲಿ ಬೇರೊಂದು ನೆಪದಲ್ಲಿ ಹಣ ಪೀಕುತ್ತವೆ.
ಸೇವೆ ನೀಡಿದ ವಾಹನಗಳಿಗಿಂತ ಕಂಪನಿಗಳು ಮಾಡಿಕೊಳ್ಳುವ ಲಾಭವೇ ಅಧಿಕವಾಗಿ, ರೈತ ಕಷ್ಟಪಟ್ಟು ಬೆಳೆದ ಬೆಳೆಯಲ್ಲಿ ಮಧ್ಯವರ್ತಿಗಳೇ ಹೆಚ್ಚು ಲಾಭ ತಿನ್ನುವಂತಹ ಪರಿಸ್ಥಿತಿ ಸಾರಿಗೆ ಲೋಕಕ್ಕೂ ಕಾಲಿಟ್ಟಿದೆ. ವರ್ಷದಲ್ಲಿ ಒಂದೆರಡು ತಿಂಗಳು ರೈತ ಬೆಳೆದ ತರಕಾರಿ ದರ ಏರಿದರೆ ಬೊಬ್ಬಿರಿಯುವ ನಾಗರಿಕ ಸಮಾಜ, ದಿನೇ ದಿನೇ ಸುಲಿಗೆ ಮಾಡುತ್ತಿರುವ ಈ ಸೇವೆಗಳ ಬಗ್ಗೆ ಧ್ವನಿ ಎತ್ತದಿರುವುದು ಅಚ್ಚರಿದಾಯಕ. ಜಾಸ್ತಿ ಹಣ ತೋರಿಸುತ್ತಿದ್ದ ದೋಷಪೂರಿತ ಆಟೊರಿಕ್ಷಾಗಳ ಮೀಟರ್ಗಳನ್ನು ಹಿಡಿದು ಸಾರಿಗೆ ಇಲಾಖೆ ದಂಡ ಹಾಕುತ್ತದೆ. ಈ ಕಡಿವಾಣ ಇಂತಹ ಕಂಪನಿಗಳಿಗೆ ಇಲ್ಲವೇ? ಡಿಜಿಟಲ್ ಲೋಕದಲ್ಲಿ ಸುಲಿಗೆ ಮಾಡುತ್ತಿರುವ ಇಂತಹ ಬಂಡವಾಳಶಾಹಿ ಕಂಪನಿಗಳಿಗೆ ‘ಅಚ್ಛೇ ದಿನ್ ಬಂದಿರುವುದಂತೂ ಸತ್ಯ.
ಪ್ರಕಾಶ್ ಕಾಕಾಲ್, ಹೆಗ್ಗೋಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.