ADVERTISEMENT

ವಾಚಕರ ವಾಣಿ: ವಯಸ್ಸಾದರೂ ಮುದಿಯಲ್ಲ!

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 16:47 IST
Last Updated 4 ಜನವರಿ 2021, 16:47 IST

ಭಾರತಕ್ಕೆ ಭಾರವಾದ ಮುದಿವಾಹನಗಳ ಬಗ್ಗೆ ಟಿ.ಆರ್.ಅನಂತರಾಮು ಅವರು ಬರೆದಿರುವ ಲೇಖನ (ಪ್ರ.ವಾ., ಜ. 4) ಸಕಾಲಿಕವಾಗಿದ್ದು, ಭವಿಷ್ಯದಲ್ಲಿ ಜಗತ್ತಿನ ಶುದ್ಧ ಗಾಳಿಯ ಕುರಿತಂತೆ ಎಚ್ಚರಿಕೆ ಗಂಟೆಯಾಗಿದೆ. ಹದಿನೈದು ವರ್ಷ ಮೀರಿದ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬುದು ಬಹಳ ಹಿಂದಿನ ಬೇಡಿಕೆಯಾಗಿದೆ. ಆದರೆ ಖಾಸಗಿ ಬಳಕೆಗಾಗಿ ಕೊಂಡಿರುವ, ಅಂದರೆ ಬಿಳಿ ಫಲಕದ ಬಹುತೇಕ ನಾಲ್ಕು ಚಕ್ರ ವಾಹನಗಳ ಉಪಯೋಗ ಕಡಿಮೆ. ತೀರಾ ಕೆಳಮಧ್ಯಮ ವರ್ಗದವರು ವಿಮೆ ಮತ್ತು ತೆರಿಗೆ ಪಾವತಿಸಿರುವಷ್ಟು ಮೌಲ್ಯದ ಇಂಧನವನ್ನೇ ಹಾಕಿಸಿರುವುದಿಲ್ಲ. ಇಂದಿನ ಮಹಾನಗರಗಳಲ್ಲಿ ವಾರಕ್ಕೊಮ್ಮೆ ಕಾರಿನ ಸವಾರಿ ಮಾಡಲೂ ಆಗದಂತಹ ಪರಿಸ್ಥಿತಿ ಇದೆ. ಅಂತಹದ್ದರಲ್ಲಿ ಹದಿನೈದು ವರ್ಷಕ್ಕೇ ಅವು ಮುದಿಯಾಗುವುದು ಅಸಂಭವ.

ಹಳದಿ ಬಣ್ಣದ ಫಲಕ ಹೊಂದಿರುವ ವಾಣಿಜ್ಯ ವಾಹನಗಳಿಗೆ ಮಾತ್ರ ಈ ರೀತಿ ನಿರ್ಬಂಧ ವಿಧಿಸುವುದು ಸೂಕ್ತ. ಜೊತೆಗೆ ಅಂತಹವರಿಗೆ ತೆರಿಗೆ ಮತ್ತು ವಿಮೆಯಲ್ಲಿ ಅತ್ಯಧಿಕ ರಿಯಾಯಿತಿ ನೀಡುವ ಮೂಲಕ ಹಳೆಯ ವಾಹನಗಳನ್ನು ತ್ಯಜಿಸಲು ಉತ್ತೇಜಿಸಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಶೀಘ್ರವಾಗಿ ಆಲೋಚಿಸಿ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಬೇಕಾದ ಅನಿವಾರ್ಯ ಇದೆ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.