ADVERTISEMENT

ಈರುಳ್ಳಿ: ಔಷಧೀಯ ಗುಣದ ಆಗರ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:04 IST
Last Updated 8 ಡಿಸೆಂಬರ್ 2019, 20:04 IST

ಈರುಳ್ಳಿ ದರ ಭಾರಿ ಪ್ರಮಾಣದಲ್ಲಿ ಏರಿದ್ದು, ಬಹುಜನರ ಪ್ರೀತಿಯ ಆಹಾರಪದಾರ್ಥವು ಗಗನಕುಸುಮವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ‘ನಾನು ಈರುಳ್ಳಿ ತಿನ್ನುವುದಿಲ್ಲ. ಈರುಳ್ಳಿ, ಬೆಳ್ಳುಳ್ಳಿ ಬಳಸದ ಕುಟುಂಬದಿಂದ ಬಂದಿದ್ದೇನೆ’ ಎಂದಿರುವುದು ಬೇಜವಾಬ್ದಾರಿಯ ಹೇಳಿಕೆಯಾಗಿದೆ. ಈರುಳ್ಳಿ–ಬೆಳ್ಳುಳ್ಳಿ ರುಚಿಕರವಷ್ಟೇ ಅಲ್ಲ, ಹೆಚ್ಚಿನ ಔಷಧೀಯ ಗುಣಗಳಿಂದ ಕೂಡಿವೆ. ಹೀಗಾಗಿ, ಆಯುರ್ವೇದದಲ್ಲಿ ಮಹತ್ವ ಪಡೆದಿರುವ ಆಹಾರ ಪದಾರ್ಥಗಳೂ ಆಗಿವೆ. ತಪ್ಪು ಗ್ರಹಿಕೆಯಿಂದಲೋ ಅಜ್ಞಾನದಿಂದಲೋ ಒಂದು ಸಮುದಾಯ ಎಷ್ಟೋ ವರ್ಷಗಳಿಂದ ಇವುಗಳನ್ನು ತಿನ್ನುವುದರ ಮೇಲೆ ಸ್ವಯಂ ನಿರ್ಬಂಧ ಹೇರಿಕೊಂಡಿದೆ. ಆದರೆ ಈ ಸಮುದಾಯದಲ್ಲೂ ಬಹಳಷ್ಟು ಮಂದಿ ಬದಲಾವಣೆಗೆ ತೆರೆದುಕೊಂಡಿರುವುದೂ ಉಂಟು.

ಪ್ರಾಚೀನ ಕಾಲದಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸುತ್ತಿದ್ದ ಋಷಿಗಳು ತಮ್ಮ ತಪಸ್ಸಿಗೆ ಹಾಗೂ ಇಂದ್ರಿಯ ನಿಗ್ರಹಕ್ಕೆ ಅಡ್ಡಿಯಾಗುವ ಕೆಲವು ಘಾಟು ವಾಸನೆಯ ಪದಾರ್ಥಗಳನ್ನು ನಿಷೇಧಿಸುತ್ತಿದ್ದುದುಂಟು. ಆದರೆ ಇಂದು ಇವುಗಳನ್ನು ಸೇವಿಸಲು ಏನು ಅಡ್ಡಿಯಾಗಿದೆ? ಬಹುಸಂಖ್ಯಾತರ ಪ್ರಿಯವಾದ ನಿತ್ಯೋಪಯೋಗಿ ಆಹಾರಪದಾರ್ಥ ಕುರಿತು ಅಸಡ್ಡೆಯ ಮಾತುಗಳನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಆಡಿರುವುದು ಸರಿಯಲ್ಲ. ಅದರಲ್ಲೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಚೌಬೆ ‘ನಾನು ಪಕ್ಕಾ ಸಸ್ಯಾಹಾರಿ. ಈವರೆಗೂ ಈರುಳ್ಳಿ ರುಚಿ ನೋಡಿಯೇ ಇಲ್ಲ’ ಎಂದು ಹೇಳಿರುವುದು ಹುಸಿ ಶ್ರೇಷ್ಠತೆಯ ಸೋಗು ಅಷ್ಟೆ.

–ಎನ್.ವಿ. ಅಂಬಾಮಣಿಮೂರ್ತಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.