ADVERTISEMENT

‘ಪಂಚಮ’ ಸಂಪುಟ: ಮತ್ತೆ ಚಾಲನೆ ಸಿಗಲಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 19:31 IST
Last Updated 12 ಸೆಪ್ಟೆಂಬರ್ 2021, 19:31 IST

‘ಪಂಚಮ’- ಕರ್ನಾಟಕ ದಲಿತ ಚಳವಳಿಯ ಇತಿಹಾಸದಲ್ಲಿ ಗುರುತರ ಪಾತ್ರ ವಹಿಸಿದ ಮಾಸಪತ್ರಿಕೆ. ಚಳವಳಿಯ ಹೆಜ್ಜೆಗುರುತುಗಳನ್ನು ನಿಷ್ಠೆಯಿಂದ ದಾಖಲಿಸಿದ ಮುಖವಾಣಿ. 70- 80ರ ದಶಕದ ಆ ಪ್ರಕ್ಷುಬ್ಧ ಕಾಲಘಟ್ಟ ವನ್ನು ಅಧ್ಯಯನ ಮಾಡಬಯಸುವವರಿಗೆ ‘ಪಂಚಮ’ದ ಸಂಚಿಕೆಗಳು ಮಹತ್ವದ ಆಕರವೂ ಹೌದು. ತುಸು ಹಿಂದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಆ ಪತ್ರಿಕೆಯ ಎಲ್ಲ ಸಂಚಿಕೆಗಳನ್ನೂ ಹಲವು ಸಂಪುಟಗಳಲ್ಲಿ ಹೊರತರುವ ಯೋಜನೆಯೊಂದನ್ನು ರೂಪಿಸಿತ್ತು. ನನಗೆ ತಿಳಿದ ಮಟ್ಟಿಗೆ, ಅದಕ್ಕಾಗಿ ನಿಧಿಯನ್ನೂ ಮೀಸಲಿಟ್ಟು ಮುದ್ರಣಾಲಯ ವನ್ನು ನಿಗದಿಪಡಿಸುವವರೆಗೂ ಯೋಜನೆ ಮುಂದುವರಿದಿತ್ತು. ಇದು, ಅರವಿಂದ ಮಾಲಗತ್ತಿಯವರು ಅಧ್ಯಕ್ಷ ರಾಗಿದ್ದಾಗಿನ ಬೆಳವಣಿಗೆ. ಆಗ ದಿಢೀರನೆ ಸಂಭವಿಸಿದ ರಾಜಕೀಯ ಪಲ್ಲಟಗಳಿಂದಾಗಿ ಮಾಲಗತ್ತಿ ಬದಲಾದರು. ಆ ಜಾಗಕ್ಕೆ ವಸಂತಕುಮಾರ್ ಬಂದರು. ದುರದೃಷ್ಟದ ಸಂಗತಿಯೆಂದರೆ, ಅಧ್ಯಕ್ಷರು ಬದಲಾದಂತೆ ಆ ಯೋಜನೆಯೂ ಹಿನ್ನೆಲೆಗೆ ಸರಿದುಹೋಗಿದೆ! ಹಾಗಾಗಬೇಕಿಲ್ಲ. ಪಂಚಮ ಸಂಪುಟಗಳ ಪ್ರಕಟಣೆ ಒಂದು ಅತ್ಯುಪಯುಕ್ತ ಯೋಜನೆ. ಅಧ್ಯಕ್ಷರು ಬದಲಾದ ಮಾತ್ರಕ್ಕೆ ಐತಿಹಾಸಿಕ ಮಹತ್ವದ ಒಂದು ಸಾಹಿತ್ಯಿಕ ಚಟುವಟಿಕೆ ನಿಂತುಹೋಗಬೇಕಿಲ್ಲ. ಮತ್ತು ಪಂಚಮ ಪ್ರಕಟಣೆ ವಿಷಯದಲ್ಲಿ ಈಗಿನ ಅಧ್ಯಕ್ಷರಿಗೆ ಯಾವುದೇ ಆಕ್ಷೇಪಗಳಿರಲು ಸಾಧ್ಯವಿಲ್ಲ. ಅವರು ಮುತುವರ್ಜಿ ವಹಿಸಿ ಅತಿ ಶೀಘ್ರದಲ್ಲಿ ‘ಪಂಚಮ’ ಸಂಪುಟಗಳನ್ನು ಹೊರತರಬೇಕೆಂಬುದು ನನ್ನಂಥ ಎಲ್ಲ ಸಾಹಿತ್ಯಾಸಕ್ತರ ಒತ್ತಾಯ.

– ಎನ್.ಎಸ್.ಶಂಕರ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT