ADVERTISEMENT

ಜುಗುಪ್ಸೆ ತರುವ ದುರ್ನಡತೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 19:31 IST
Last Updated 7 ಮಾರ್ಚ್ 2021, 19:31 IST

ಈಚೆಗೆ ಒಂದು ಮುಂಜಾನೆ ಓಣಿಯಲ್ಲೊಂದು ಜೋರಾದ ಜಗಳ ನಡೆಯುತ್ತಿತ್ತು. ಹಳ್ಳಿಗರು ಮಾಡುವ ಇಂತಹ ಜಗಳಗಳಲ್ಲಿ ಕೆಲವು ವಿಶಿಷ್ಟ ಪದಗಳು ಹೇರಳವಾಗಿ ಸಿಗುತ್ತವೆ! ಅದರಲ್ಲೂ ಜಗಳ ಮಾಡುತ್ತಿರುವವರು ಅನಕ್ಷರಸ್ಥರಾದಷ್ಟೂ ಬೈಗುಳಗಳ ಪದಬಳಕೆಯ ರುಚಿ ಹೆಚ್ಚು. ಅದಕ್ಕಾಗಿ ಆ ಜಗಳಕ್ಕೆ ಕಿವಿಗೊಟ್ಟೆ.

ಪೋಷಕರಿಗೆ ತಿಳಿಯದಂತೆ ಮೊಬೈಲ್ ಬಳಸುವ, ಹಣ ಪೋಲು ಮಾಡುವ ಮತ್ತು ಸುಳ್ಳು ಹೇಳುವ ಮಗನ ಕುರಿತು ತಾರಕ ಸ್ವರದಲ್ಲಿ ಅವನ ‌ತಂದೆ ಹೇಳುತ್ತಿದ್ದರು‌, ‘ಹೀಗೇ ಬಿಟ್ರೆ ನೀನು ಮುಂದೊಂದು ದಿನ ದೊಡ್ಡ ಕ್ರಿಮಿನಲ್ ರಾಜಕಾರಣಿ ಆಗ್ತೀಯ. ಆಮೇಲೆ ನೀನು ಮಾಡೋ ಘನಂದಾರಿ ಕೆಲಸಾನ ಟೀವಿಲಿ ನೋಡಿ ನಾವ್ ಹೆತ್ತೋರು ಎದೆ ಒಡ್ಕೊಂಡು ಸಾಯಬೇಕು’. ಜಗಳದಲ್ಲಿ‌ ಈವರೆಗೆ ಇಂಥ ಪದಗಳನ್ನು ಬಳಸಿದ್ದನ್ನು ನಾನು ಕೇಳಿರಲಿಲ್ಲ. ಅಂದರೆ ಪ್ರಸ್ತುತ ರಾಜಕಾರಣಿಗಳು ಮಾಡುತ್ತಿರುವ ಕೆಲಸಗಳು ಜನರ ಮನಸ್ಸಿನಲ್ಲಿ ಎಂತಹ ಭಾವನೆಗಳನ್ನು ಹುಟ್ಟುಹಾಕುತ್ತಿವೆ ಅಲ್ಲವೇ?

ರಾಜಕಾರಣವೆಂದರೆ ಜನ ಅಸಹ್ಯ ಪಟ್ಟುಕೊಳ್ಳುವಷ್ಟರ ಮಟ್ಟಿಗೆ ಇಂದಿನ ರಾಜಕಾರಣಿಗಳಿದ್ದಾರೆ. ಒಂದು ಕಾಲದಲ್ಲಿ ರಾಜಕೀಯವೆಂಬುದು ಸಮಾಜದ ಏಳಿಗೆಗಾಗಿ ಇರುವ ಪುಣ್ಯಕ್ಷೇತ್ರವೆಂಬ ಪ್ರತೀತಿ ಇತ್ತು. ಆದರೆ ಇಂದಿನ ರಾಜಕಾರಣಿಗಳ ದುರ್ನಡತೆ ಜನರಲ್ಲಿ ಜುಗುಪ್ಸೆ ಮೂಡಿಸುತ್ತಿದೆ.

ADVERTISEMENT

-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.