ಜಿಲ್ಲಾ ಪಂಚಾಯಿತಿ ಮತ್ತು ಅದರ ಅಧೀನದ ಎಲ್ಲಾ ಇಲಾಖೆಗಳು ನಡೆಸುವ ಸಭೆ, ಸಮಾರಂಭಗಳಲ್ಲಿ ಒಂದೇ ಬಾರಿ ಬಳಸಿ ಎಸೆಯುವ ಪ್ಲಾಸ್ಟಿಕ್ ಬಾಟಲ್ ನೀರನ್ನು ನಿಷೇಧಿಸಿ ಆರ್ಡಿಪಿಆರ್ ಪ್ರಧಾನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹ.
ಇದರಿಂದ ಇಲಾಖೆಗೆ ಹಣ ಉಳಿಯುವುದಲ್ಲದೆ ಪರಿಸರ ಮಲಿನವಾಗುವುದನ್ನೂ ತಡೆಯಬಹುದು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳ ಸಲುವಾಗಿ ವೇದಿಕೆಗಳಲ್ಲಿ ಕುಳಿತ ಎಲ್ಲ ಅಧಿಕಾರಿ, ಜನಪ್ರತಿನಿಧಿ ಹಾಗೂ ಆಹ್ವಾನಿತರ ಮುಂದೆ ಅಗತ್ಯ ಇಲ್ಲದಿದ್ದರೂ ಒಂದೊಂದು ಮಿನರಲ್ ವಾಟರ್ ಬಾಟಲ್ ಇಡುವುದು ಫ್ಯಾಷನ್ ಆಗಿಬಿಟ್ಟಿದೆ.
ಈ ಪದ್ಧತಿಯನ್ನು ನಿಷೇಧಿಸುವ ಮೂಲಕ ಆರ್ಡಿಪಿಆರ್, ಇತರ ಇಲಾಖೆಗಳಿಗೆ ಮಾದರಿಯಾಗಿದೆ. ರಾಜ್ಯದ ಎಲ್ಲ ಸರ್ಕಾರಿ ಇಲಾಖೆ ಮತ್ತು ಸರ್ಕಾರಿ ಅನುದಾನಿತ ಎಲ್ಲ ಸಂಸ್ಥೆಗಳು ತಮ್ಮ ಸಭೆ, ಸಮಾರಂಭಗಳಲ್ಲಿ ನೀರಿನ ಬಾಟಲ್ ಬಳಕೆಯನ್ನು ನಿಷೇಧಿಸುವ ಮೂಲಕ ಸರ್ಕಾರದ ಹಣ ಪೋಲಾಗುವುದನ್ನು ತಪ್ಪಿಸುವುದರ ಜೊತೆಗೆ ಪರಿಸರವನ್ನು ರಕ್ಷಿಸಬೇಕಿದೆ. ಎಲ್ಲಾ ಇಲಾಖೆಗಳ ಮುಖ್ಯಸ್ಥರೂ ಇಂಥ ಆದೇಶ ಹೊರಡಿಸಲಿ.
–ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.