ADVERTISEMENT

ಪಿಎಂ– ಕೇರ್ಸ್‌: ಸಲ್ಲದ ಗೊಂದಲ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 17:54 IST
Last Updated 5 ಅಕ್ಟೋಬರ್ 2022, 17:54 IST
   

ಪಿಎಂ– ಕೇರ್ಸ್ ನಿಧಿಯು ಆರಂಭದಿಂದಲೂ ಗೊಂದಲದ ಗೂಡಾಗಿದೆ. ದೇಣಿಗೆ ನೀಡಿದವರ ವಿವರ
ಬಹಿರಂಗಪಡಿಸದೇ ಇರುವುದರಿಂದ ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಹಾಗೂ ಅವರ ಹಣದ ಮೂಲ ಏನು ಎಂಬುದನ್ನು ಮರೆಮಾಚಿದಂತಾಗುತ್ತದೆ. ಟ್ರಸ್ಟಿಗಳು ಹಾಗೂ ಸಲಹೆಗಾರರಾಗಿ ನೇಮಕಗೊಂಡವರು ಗಣ್ಯರು ಎಂದಮಾತ್ರಕ್ಕೆ ಈ ನಿಧಿಗೆ ವಿಶ್ವಾಸಾರ್ಹತೆ ಬರುವುದಿಲ್ಲ. ಈ ನಿಧಿಯ ಕುರಿತು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡಲು ಮತ್ತು ಮಹಾಲೇಖಪಾಲರಿಂದ ಲೆಕ್ಕಪರಿಶೋಧನೆ ಮಾಡಿಸಲು ಸರ್ಕಾರ ನಿರಾಕರಿಸಿರುವುದು ನಿಧಿಯ ಕುರಿತು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಸಾರ್ವಜನಿಕರೇ ನೀಡಿದ ಹಣದ ವಿವರವನ್ನು ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂದು ಕೇಳುವುದು ಮಾಹಿತಿ ಹಕ್ಕಿನ ವ್ಯಾಪ್ತಿಯ ಒಳಗೆ ಬರುತ್ತದೆ. ಇದನ್ನು ಸ್ಥಾಪಿಸಿರುವುದು ಖಾಸಗಿ ವ್ಯಕ್ತಿಗಳು ಅಲ್ಲ. ಪ್ರಧಾನಿಯವರೇ ಇದರ ಅಧ್ಯಕ್ಷರು. ಇದಕ್ಕೆ ಹಣ ನೀಡಿರುವುದು ಸಾರ್ವಜನಿಕರು. ಆದ್ದರಿಂದ ಈ ಕುರಿತು ಜನರಿಗೆ ಉತ್ತರದಾಯಿ
ಯಾಗಿರುವುದು ಸರ್ಕಾರದ ಬಾಧ್ಯತೆ ಆಗಿರುತ್ತದೆ. ಈ ನಿಧಿಯ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಪ್ರಧಾನಿ ಕಚೇರಿಯು ಸ್ಪಷ್ಟ ಉತ್ತರ ನೀಡುವ ಮೂಲಕ ನಿಧಿಯ ಕುರಿತ ಗೊಂದಲಗಳಿಗೆ ಪರದೆ ಎಳೆಯಬೇಕಾಗಿದೆ.

ನಿರಂಜನ್ ಮೂರ್ತಿ ಆರ್.ಕೆ.,ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.