ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಬುಧವಾರ, 17 ಸೆಪ್ಟೆಂಬರ್ 2025

ವಾಚಕರ ವಾಣಿ
Published 16 ಸೆಪ್ಟೆಂಬರ್ 2025, 22:30 IST
Last Updated 16 ಸೆಪ್ಟೆಂಬರ್ 2025, 22:30 IST
   

‘ಕಾನೂನು ಕ್ಲಿನಿಕ್’ ಕ್ರಾಂತಿಕಾರಿ ನಡೆ

ಮೈಸೂರಿನ ಜಿಲ್ಲಾ ಸೈನಿಕ ಭವನದಲ್ಲಿ ವೀರ್ ಪರಿವಾರ್ ಸಹಾಯತಾ ಯೋಜನೆಯಡಿ ‘ಉಚಿತ ಕಾನೂನು ಸೇವೆಗಳ ಕ್ಲಿನಿಕ್’ ಪ್ರಾರಂಭಿಸಲಾಗಿದೆ. ಸೈನಿಕರ ನೆಮ್ಮದಿಯ ಜೀವನಕ್ಕಾಗಿ ಹಾಗೂ ಅವರ ಕುಟುಂಬದ ಸದಸ್ಯರ ಕಾನೂನಾತ್ಮಕ ಸಮಸ್ಯೆಗಳ ನಿವಾರಣೆಗಾಗಿ ಈ ಕ್ಲಿನಿಕ್ ಕಾರ್ಯ ನಿರ್ವಹಿಸಲಿದೆ. ರಾಜ್ಯ ಸರ್ಕಾರವು ರಾಜ್ಯದಾದ್ಯಂತ ‘ನಮ್ಮ ಕ್ಲಿನಿಕ್’ ಹೆಸರಿನಡಿ ಉಚಿತ ಆರೋಗ್ಯ ಸೇವೆ ನೀಡುತ್ತಿದೆ. ಇದೀಗ ‘ಕಾನೂನು ಕ್ಲಿನಿಕ್‌’ ಮೂಲಕ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ.

– ಕೆ.ವಿ. ವಾಸು, ಮೈಸೂರು

ADVERTISEMENT

***********

ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ 

ಪ್ರೌಢಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿರುವುದು ಉತ್ತಮ ಬೆಳವಣಿಗೆ. ತರಬೇತಿಯ ಜೊತೆಗೆ ಪ್ರತಿ ವಿದ್ಯಾರ್ಥಿಗೆ ಉಪಾಹಾರ, ಪ್ರಯಾಣ ಭತ್ಯೆಯಾಗಿ ₹750 ನೀಡುವುದರಿಂದ ಬಡಮಕ್ಕಳಿಗೆ ಅನುಕೂಲವಾಗಲಿದೆ. ಪೋಷಕರಿಗೆ ಈ ತರಬೇತಿ ಬಗ್ಗೆ ಜಾಗೃತಿ ಮೂಡಿಸಬೇಕು. ಮಕ್ಕಳು ಮುಂದೆ ಓದಿ ಉದ್ಯೋಗ ವಿಲ್ಲದೆ ಅಲೆದಾಡುವುದಕ್ಕಿಂತ ಶಾಲಾ ಹಂತದಲ್ಲಿಯೇ ಅವರನ್ನು ಸ್ವಯಂ ಉದ್ಯೋಗಕ್ಕೆ ಸಜ್ಜುಗೊಳಿಸುವುದು ಮಹತ್ವದ ಕಾರ್ಯ. ಈ ಯೋಜನೆಯನ್ನು ಪದವಿ ಮಟ್ಟಕ್ಕೂ ವಿಸ್ತರಿಸಬೇಕು. 

– ಯಲ್ಲಪ್ಪ ಟಿ. ಗಲಗ್ಕರ್, ದೇವದುರ್ಗ

***********

ದಂಡ ಹೊಂಡಕ್ಕೂ ಇಲ್ಲ, ಉಬ್ಬಿಗೂ ಇಲ್ಲ

ಬೆಂಗಳೂರಿನ ಜ್ಞಾನಭಾರತಿ ಆವರಣದ ಕೂಡುರಸ್ತೆ ಬಳಿ ಸ್ವರೂಪ್‌ ಹೆಸರಿನ ಬೈಕ್‌ ಸವಾರ ಹೆಲ್ಮೆಟ್‌ ಧರಿಸಿದ್ದರೂ ಅಸುನೀಗಿದ್ದು ಜಾಗೃತ ಸಮಾಜವೇ ತಗ್ಗಿಸಬೇಕಾದ ಸುದ್ದಿಯಾಗಿದೆ (ಪ್ರ.ವಾ., ಸೆಪ್ಟೆಂಬರ್‌ 15). ಈ ಅಪಘಾತಕ್ಕೆ ಕಾರಣರಾದವ ರೆಂದರೆ: ವೇಗ ತಡೆಗೆಂದು ಉಬ್ಬುರಸ್ತೆ ನಿರ್ಮಿಸಿ ಬಣ್ಣ ಬಳಿಯದೇ ಬಿಟ್ಟು ಹೋದ ಎಂಜಿನಿಯರ್‌ ಮತ್ತು ಮೇಲ್ವಿಚಾರಕ ಅಧಿಕಾರಿ; ಉಬ್ಬುಗಳು ಕಣ್ಣೆದುರೇ ಇದ್ದರೂ ಕ್ರಮಕೈಗೊಳ್ಳದ ಜ್ಞಾನಭಾರತಿ ಠಾಣೆಯ ಅಧಿಕಾರಿ ವರ್ಗ; ಉಬ್ಬುಗಳು ಕ್ಯಾಂಪಸ್‌ನಲ್ಲೇ ನೂರಾರಿದ್ದರೂ ಬಣ್ಣ ಬಳಿಯಲು ಒತ್ತಾಯಿಸದೆ ಓಡಾಡುವ ವಿದ್ಯಾವಂತರ ಸಮೂಹ; ನಜ್ಜುಗುಜ್ಜಾಗಬಲ್ಲ ಅಗ್ಗದ ಹೆಲ್ಮೆಟ್‌ಗಳ ಮಾರಾಟ, ಬಳಕೆಗೆ ಅನುಮತಿ ನೀಡುವ ರಸ್ತೆ ಸುರಕ್ಷಾ ಸಿಬ್ಬಂದಿ; ಕೊನೆಯದಾಗಿ ಈ ಸಾವಿಗೆ ಯಾರೂ ದಂಡ ತೆರದೆ, ಶಿಕ್ಷೆ ಅನುಭವಿಸದೆ, ಪಾಠವನ್ನೂ ಕಲಿಯದೆ
ನುಣುಚಿಕೊಳ್ಳಬಹುದಾದ ನ್ಯಾಯ ವ್ಯವಸ್ಥೆ. ನಮ್ಮಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದಾಗಿ ಜೀವ ತೆರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಹೊಂಡಗಳಿಗಂತೂ ಯಾರದೂ ತಲೆದಂಡವಿಲ್ಲ. ಉಬ್ಬಿಗೂ ಇಲ್ಲವೆ?

– ನಾಗೇಶ ಹೆಗಡೆ, ಕೆಂಗೇರಿ

***********

ಕಸಾಪ: ಎಲ್ಲ ಸ್ಥಾನಕ್ಕೂ ಚುನಾವಣೆ

ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಯುವಾಗ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮತ್ತು ಎಲ್ಲಾ ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಾ ಬಂದಿದೆ. ಆದರೆ, ತಾಲ್ಲೂಕು ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುವುದಿಲ್ಲ. ಆಯ್ಕೆಯಾದ ಅಧ್ಯಕ್ಷರು ತಮಗೆ ಚುನಾವಣೆಯಲ್ಲಿ ಸಹಾಯ ಮಾಡಿದವರನ್ನು ತಾಲ್ಲೂಕು
ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ. ಹಾಗೆಯೇ ರಾಜ್ಯ ಅಧ್ಯಕ್ಷರು ತಮಗೆ ಬೇಕಾದವರನ್ನೇ ಕೇಂದ್ರ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳುತ್ತಾರೆ. ಪ್ರತಿ ಜಿಲ್ಲೆಯಲ್ಲೂ ಇದೇ ಪ್ರಕ್ರಿಯೆ ನಡೆದು ಕಾರ್ಯದರ್ಶಿ, ಪದಾಧಿಕಾರಿಗಳನ್ನು ನೇಮಿಸಿ ಕೊಳ್ಳುತ್ತಾರೆ. ಇದರ ಬದಲಿಗೆ, ಅಧ್ಯಕ್ಷರು ಸೇರಿದಂತೆ ಪ್ರತಿ ಪದಾಧಿಕಾರಿಯನ್ನು ಚುನಾವಣೆ ಮೂಲಕವೇ ಆಯ್ಕೆ ಮಾಡಬೇಕಿದೆ.

– ನಂದೀಶ್ವರ ದಂಡೆ, ಹೊಸಪೇಟೆ 

***********

ಬಡಜನರ ಜಿಎಸ್‌ಟಿ ವಾಪಸ್‌ ನೀಡಿ

ಕೇಂದ್ರ ಸರ್ಕಾರವು ಜಿಎಸ್‌ಟಿ ತೆರಿಗೆ ಹಂತಗಳನ್ನು ಪರಿಷ್ಕರಿಸಿರುವುದು ಸ್ವಾಗತಾರ್ಹ. ಇದರಿಂದ ಬಡ ಮತ್ತು ಮಧ್ಯಮವರ್ಗದವರಿಗೆ ಸ್ವಲ್ಪಮಟ್ಟಿಗೆ ಅನುಕೂಲವಾಗಲಿದೆ. ದೇಶದಲ್ಲಿ 2017ರ ಜುಲೈನಿಂದ ಜಿಎಸ್‌ಟಿ ಜಾರಿಗೊಂಡಿದೆ. ಕೊರೊನಾ ಸಮಯದಲ್ಲಿ ಜನರು ಹೆಚ್ಚಿನ ಆರ್ಥಿಕ ಸಂಕಷ್ಟ ಅನುಭವಿಸಿದ್ದಾರೆ. ಸದ್ಯ ತೆರಿಗೆ ಹಂತಗಳ ಪರಿಷ್ಕರಣೆಯಾಗಿದೆ. ಹಾಗಾಗಿ, ಬಡಜನರಿಂದ ಹೆಚ್ಚಿನ ರೂಪದಲ್ಲಿ ಪಡೆದಿರುವ ಜಿಎಸ್‌ಟಿ ಹಣವನ್ನು ಕೇಂದ್ರ ಸರ್ಕಾರ ಯಾವುದಾದರೂ ರೂಪದಲ್ಲಿ ವಾಪಸ್‌ ನೀಡಲಿ.

– ನರಸಿಂಹಮೂರ್ತಿ, ಚಂದಾಪುರ

***********

ಅರ್ಹರಿಗೆ ಮೀಸಲಾತಿ ಲಭಿಸಲಿ

ಬಿ.ಆರ್‌. ಅಂಬೇಡ್ಕರ್ ಅವರ ಮೀಸಲಾತಿ ಪರಿಕಲ್ಪನೆಯು ಹಿಂದುಳಿದವರನ್ನು ಸಮಾಜಮುಖಿಯಾಗಿ ಮೇಲುಸ್ತರಕ್ಕೆ ತಂದು ಎಲ್ಲರಂತೆ ಬದುಕಲು ಅವಕಾಶ ನೀಡುವುದಾಗಿದೆ. ಆದರೆ, ಸಮಾಜದಲ್ಲಿ ತಮ್ಮದೇ ಛಾಪು ಮೂಡಿಸಿದರೂ ಮೀಸಲಾತಿಗೆ ಜೋತು ಬಿದ್ದು ಎಲ್ಲಾ ಆಯಾಮದಲ್ಲೂ ಹಿಂದುಳಿದವರನ್ನು ಕಡೆಗಣಿಸುತ್ತಲೇ ಬಂದಿರುವುದು ವಿಷಾದನೀಯ. ಈ ನಡುವೆ ಬೇರೆ ಧರ್ಮಕ್ಕೆ ಮತಾಂತರಗೊಂಡರೂ ಮೂಲ ಜಾತಿ ಹೆಸರಿನಡಿ ಸೌಲಭ್ಯ ಪಡೆಯಲು ಹವಣಿಸುವುದು ಅಕ್ಷಮ್ಯ.

– ಆಕಾಶ್ ನವಲಗಣ್ಣ, ಬಾಗಲಕೋಟೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.