ADVERTISEMENT

ಎಳೆಯ ಮನಸ್ಸುಗಳ ಬಗ್ಗೆ ಚಿಂತಿಸಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 17:05 IST
Last Updated 18 ಸೆಪ್ಟೆಂಬರ್ 2022, 17:05 IST

ತಮಿಳುನಾಡಿನ ಗ್ರಾಮವೊಂದರಲ್ಲಿ ಅಂಗಡಿ ಮಾಲೀಕರೊಬ್ಬರು ದಲಿತ ಮಕ್ಕಳಿಗೆ ಜಾತಿಯ ಕಾರಣಕ್ಕೆ ಮಿಠಾಯಿ ನೀಡಲು ನಿರಾಕರಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ನಿಮಗೆ ಯಾವುದೇ ತಿನಿಸು ನೀಡಬಾರದೆಂಬ ನಿರ್ಬಂಧವಿದೆ’ ಎಂಬ ಅಂಗಡಿ ಮಾಲೀಕನ ಮಾತಿಗೆ, ‘ನಿರ್ಬಂಧ! ಯಾವ ನಿರ್ಬಂಧ?’ ಎಂದು ಬಾಲಕನೊಬ್ಬ ಮುಗ್ಧತೆಯಿಂದ ಕೇಳುವುದನ್ನು ನೋಡಿದಾಗ ಮನಸ್ಸು ಭಾರವಾಗಿ ಸಂಕಟವಾಗುತ್ತದೆ. ಶೂದ್ರರಿಗೆ, ಕೆಳ ವರ್ಗದವರಿಗೆ ಸಮಾನ ಹಕ್ಕುಗಳಿಗಾಗಿ ಶತಮಾನದ ಹಿಂದೆಯೇ ಹೋರಾಟ ಮಾಡಿದ ಪೆರಿಯಾರ್ ಅವರ ಜನ್ಮದಿನದಂದೇ ಈ ಪ್ರಕರಣ ನಡೆದಿರುವುದು ವಿಪರ್ಯಾಸ.

ಸವರ್ಣೀಯರು ಹಾಗೂ ಪರಿಶಿಷ್ಟರ ನಡುವೆ ನಮ್ಮ ಗ್ರಾಮೀಣ ಭಾಗದಲ್ಲಿ ಜಗಳಗಳಾಗುವುದು, ನಂತರ ಇತ್ಯರ್ಥ ಮಾಡಿಕೊಂಡು ಒಂದಾಗುವುದು ಸರ್ವೇ ಸಾಮಾನ್ಯ ಸಂಗತಿ. ಆದರೆ ಈ ಊರಿನಲ್ಲಿ ಈ ಜಗಳವು ಮಕ್ಕಳಿಗೆ ಮಿಠಾಯಿ ನಿರಾಕರಿಸುವ ಮಟ್ಟಕ್ಕೆ ಹೋಗಿರುವುದು ನಿಜಕ್ಕೂ ದುರಂತ. ಇಂತಹ ನಡೆಗಳು ಆ ಎಳೆಯ ಮನಸ್ಸುಗಳ ಮೇಲೆ ಎಂತಹ ಪರಿಣಾಮ ಬೀರಬಹುದು ಎಂದು ಗಂಭೀರವಾಗಿ ಆಲೋಚಿಸಬೇಕಾಗಿದೆ. ಸಮಾಜದಲ್ಲಿನ ಇಂತಹ ತಾರತಮ್ಯ ನಿವಾರಣೆಗೆ ಪ್ರಯತ್ನಪಡದೆ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದು, ಕೇವಲ ಕಾನೂನಿನ ಮೂಲಕವೇ ಮತಾಂತರ ತಡೆಯಲು ಹೊರಟಿರುವುದು ಅರ್ಥಹೀನ.

ಡಾ. ಟಿ.ಜಯರಾಂ,ಕೋಲಾರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.