ಕನ್ನಡದ ರಾಮಾಯಣ ಕೃತಿಗಳಲ್ಲಿ ತೊರವೆ ರಾಮಾಯಣವೂ ಒಂದು. 15ನೇ ಶತಮಾನದಲ್ಲಿ ರಚಿತವಾದ ಈ ಕೃತಿಯನ್ನು ನಡುಗನ್ನಡದಲ್ಲಿ (ಭಾಮಿನಿ ಷಟ್ಪದಿಯಲ್ಲಿ) ತೊರವೆ ನರಹರಿ ಅಥವಾ ಕುಮಾರ ವಾಲ್ಮೀಕಿಯು ರಚಿಸಿದ್ದಾನೆ. ಸರಳ ನಿರೂಪಣೆಯಿಂದಾಗಿ ಈಕೃತಿ ಜನಪ್ರಿಯತೆಯನ್ನು ಪಡೆದಿದೆ. ಒಂದು ಕಾಲದಲ್ಲಿ ಮಲೆನಾಡಿನ ಬಹುತೇಕ ಮನೆಗಳಲ್ಲಿ ಈ ಪುಸ್ತಕ ಸಂಗ್ರಹವಿದ್ದು ಮನೆಮಂದಿಯೆಲ್ಲ ಕುಳಿತು ಸಾಯಂಕಾಲ ಓದುವುದು ವಾಡಿಕೆಯಾಗಿತ್ತು. ಜೊತೆಗೆ ಯಕ್ಷಗಾನದ ಅನೇಕ ಪ್ರಸಂಗಗಳಿಗೆ ಈ ಕೃತಿ ಆಧಾರ.
ವಿಪರ್ಯಾಸವೆಂದರೆ, ಕೃತಿಯ ಪ್ರತಿಗಳು ಈಗ ಪುಸ್ತಕದ ಅಂಗಡಿಗಳಲ್ಲಿ ಸಿಗುತ್ತಿಲ್ಲ. ಎರಡು– ಮೂರು ವರ್ಷಗಳಿಂದ ಈ ಕೃತಿಗಾಗಿ ಬೆಂಗಳೂರಿನ ಎಲ್ಲ ಪುಸ್ತಕದ ಅಂಗಡಿಗಳಲ್ಲಿ ಹಾಗೂ ಸಾಹಿತ್ಯ ಪರಿಷತ್ನಲ್ಲಿ ವಿಚಾರಿಸಿದ್ದೇನೆ. ‘ಖಾಲಿಯಾಗಿದೆ, ಮರು ಮುದ್ರಣಗೊಂಡಿಲ್ಲ’ ಎಂಬ ಉತ್ತರವೇ ದೊರೆಯುತ್ತಿದೆ. ಇದನ್ನು ಕೇಳಿ ನಿಜಕ್ಕೂ ಬೇಸರ ಆಗುತ್ತಿದೆ. ಇದು ಒಂದು ಕೃತಿಯ ಕಥೆ. ಇಂತಹ ಅನೇಕ ಮಹತ್ವದ ಕೃತಿಗಳ ಸ್ಥಿತಿ ಹೇಗಿರಬಹುದು? ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕೃತಿಗಳು ಎಲ್ಲ ಕಾಲಕ್ಕೂ ಎಲ್ಲರಿಗೂ ಸಿಗಬೇಕಲ್ಲವೇ? ಈ ಬಗ್ಗೆ ಅನಾದರವೇಕೆ ಎಂಬುದು ಅರ್ಥವಾಗುತ್ತಿಲ್ಲ. ಇದು ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತಿನ ಹೊಣೆಗಾರಿಕೆಯಲ್ಲವೇ? ಈ ಬಗ್ಗೆ ಇನ್ನಾದರೂ ಯೋಚಿಸಲಿ.
ರವಿ ಮಡೋಡಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.