ಅಂತರರಾಜ್ಯ ಬಸ್ ಸಂಚಾರ ಪುನರಾರಂಭದ ಕುರಿತು ರಾಜ್ಯ ಸರ್ಕಾರವು ವಿವಿಧ ರಾಜ್ಯಗಳಿಗೆ ಪತ್ರ ಬರೆದಿರುವುದಾಗಿ ವರದಿಯಾಗಿದೆ (ಪ್ರ.ವಾ., ಜೂನ್ 9). ವ್ಯವಹಾರದ ದೃಷ್ಟಿಯಿಂದ ಇದು ಸರಿ ಎನಿಸಿದರೂ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಈ ಪ್ರಸ್ತಾವವನ್ನು ಮರು ಪರಿಶೀಲನೆಗೆ ಒಳಪಡಿಸುವುದು ಒಳ್ಳೆಯದು.
ಮಹಾರಾಷ್ಟ್ರ ಬಿಟ್ಟು ಇತರ ನೆರೆಹೊರೆ ರಾಜ್ಯಗಳೊಡನೆ ಬಸ್ ಸಂಚಾರ ಪುನರಾರಂಭಿಸುವ ಇಂಗಿತವನ್ನು ಸಾರಿಗೆ ಸಚಿವರು
ವ್ಯಕ್ತಪಡಿಸಿದ್ದಾರೆ. ಆದರೆ ತೆಲಂಗಾಣವು ಮಹಾರಾಷ್ಟ್ರದೊಡನೆ ಗಡಿ ಹಂಚಿಕೊಂಡಿದೆ.
ಜನ ಅಲ್ಲಿಗೆ ತಲುಪಿ, ಅಲ್ಲಿಂದ ಬರುವ ಬಸ್ಸುಗಳಲ್ಲಿ ಕರ್ನಾಟಕಕ್ಕೆ ಬಂದು ಇಳಿದರೆ ಅವರನ್ನು ತಡೆಯುವುದೆಂತು? ಹಾಗೆಯೇ ತಮಿಳುನಾಡಿನಲ್ಲಿ ಅನಿಯಂತ್ರಿತವಾಗಿ ಕೊರೊನಾ ಸೋಂಕು ಹಬ್ಬುತ್ತಿರುವಾಗ ಅಲ್ಲಿಗೆ ಬಸ್ ಸಂಚಾರ ಆರಂಭಿಸಿದರೆ ಮತ್ತೆ ಅಪಾಯವನ್ನು ಆಹ್ವಾನಿಸಿದಂತೆಯೇ.
ಒಂದುವೇಳೆ ತಮಿಳುನಾಡಿಗೆ ಬಸ್ ಸಂಚಾರ ಆರಂಭಿಸದೆ ಕೇರಳಕ್ಕೆ ಆರಂಭಿಸಿದರೆ, ಜನ ತಮಿಳುನಾಡಿನಿಂದ ಕೇರಳಕ್ಕೆ ತೆರಳಿ ಆ ಮೂಲಕ ಇಲ್ಲಿಗೆ ಬರಬಹುದು. ಸರ್ಕಾರವು ಈ ಮೂಲಗಳಿಂದ ಸಂಪಾದಿಸುವ ಹಣದ ಹಲವು ಪಟ್ಟನ್ನು ಆ ರಾಜ್ಯಗಳಿಂದ ಬಸ್ಗಳಲ್ಲಿ ಬಂದು ಇಲ್ಲಿ ತಳವೂರುವ ಸೋಂಕಿತರ ಉಪಚಾರ, ಕ್ವಾರಂಟೈನ್ಗೆ ವ್ಯಯಿಸುವಂತೆ ಆಗಬಾರದು.
-ನರೇಂದ್ರ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.