ಮಡಿಕೇರಿ, ಹಂಪಿ ಮೊದಲಾದ ಪ್ರವಾಸಿ ತಾಣಗಳ ವಿಹಾರಕ್ಕೆ ನಿರ್ಬಂಧವಿಲ್ಲದ್ದರಿಂದ ಪ್ರವಾಸಿಗರು ಹಿಂಡುಹಿಂಡಾಗಿ ಜಮಾಯಿಸುತ್ತಿದ್ದಾರೆ. ಇಲ್ಲೆಲ್ಲ ಮಾಸ್ಕ್ ಧರಿಸದೆ, ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ನಡೆದಾಡುತ್ತಿದ್ದಾರೆ. ಕೊರೊನಾದ ನಿಯಮಗಳನ್ನು ಮರೆತು ಪ್ರವಾಸಿಗರು ವಿಹರಿಸುತ್ತಿರುವುದನ್ನು ಗಮನಿಸಿದರೆ, ಕರ್ನಾಟಕ ಕೊರೊನಾಮುಕ್ತವಾಗಿದೆಯೇನೋ ಎಂಬಂತೆ ಭಾಸವಾಗುತ್ತದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಜೀವನಕ್ಕೆ ಬೆಲೆ ಕೊಡುವ ಆತುರದಲ್ಲಿ ಜೀವ ರಕ್ಷಣೆ ಮರೆಯುವುದು ಬೇಡ. ಎಲ್ಲೆಲ್ಲಿ ನಿರ್ಬಂಧ ಸಡಿಲಿಕೆಯು ಕೊರೊನಾ ವ್ಯಾಪಿಸಲು ಕಾರಣವಾಗುತ್ತಿದೆ ಎನಿಸುವುದೋ ಅಲ್ಲೆಲ್ಲ ನಿರ್ಬಂಧ ಹೇರುವುದು ಉಚಿತ.
ವಿದ್ಯಾಗಮದಂತಹ ಯೋಜನೆಯ ಜಾರಿಗೆ ಸರಳ ಮಾರ್ಗದರ್ಶಿ ಸೂತ್ರಗಳು ಇದ್ದವು. ಅವುಗಳನ್ನೇ ಅನುಷ್ಠಾನಕ್ಕೆ ತರುವಲ್ಲಿ ಲೋಪದೋಷಗಳಾಗಿ ಈಗ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವಾಗ, ಬೃಹತ್ ದಸರಾ ಆಚರಣೆಯಲ್ಲಿ ಅತ್ಯಂತ ಕಠಿಣ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವಲ್ಲಿ ಲೋಪದೋಷವಾದರೆ ಕೊರೊನಾಗೆ ಹೆಬ್ಬಾಗಿಲು ತೆಗೆದಂತೆಯೇ ಆದೀತು. ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿಯೇ ತೀರುತ್ತೇವೆ ಎಂಬ ಇಚ್ಛಾಶಕ್ತಿ ಇದ್ದರೆ ಮಾತ್ರ ಸಾರ್ವಜನಿಕವಾಗಿ ದಸರಾ ಆಚರಿಸಲು ಮುಂದಾಗಲಿ.
- ಸತ್ಯಬೋಧ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.