ರಾಯಚೂರು ಉಷ್ಣವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ಪೂರೈಕೆಯಲ್ಲಿನ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಅದರ ಪರಿಣಾಮವಾಗಿ ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಈ ಕೊರತೆಯು, ಪರ್ಯಾಯ ಇಂಧನ ಮೂಲಗಳ ಬಳಕೆಗೆ ಒತ್ತು ನೀಡಬೇಕಾದ ಅಗತ್ಯವನ್ನು ನಮಗೆ ತಿಳಿಸುತ್ತದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ವಋತುಗಳಲ್ಲಿ ಸೂರ್ಯನ ಶಾಖ ಹೇರಳ ಪ್ರಮಾಣದಲ್ಲಿ ದೊರೆಯುತ್ತಿದೆ. ರಾಜ್ಯ ಸರ್ಕಾರದ ಆಧೀನದಲ್ಲಿರುವ ಎಲ್ಲ ನೀರಾವರಿ ಕಾಲುವೆಗಳು, ಗೋಮಾಳಗಳು, ಬೋಳುಬೆಟ್ಟಗಳ ಮೇಲೆ ಸೌರವಿದ್ಯುತ್ ಫಲಕಗಳನ್ನು ಅಳವಡಿಸಿ, ಕಡಿಮೆ ದರದಲ್ಲಿ ಸೌರವಿದ್ಯುತ್ ಉತ್ಪಾದಿಸಬಹುದಾಗಿದೆ.
ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆ ಮೇಲೆ ರಾಜ್ಯ ಸರ್ಕಾರವು ಸೌರವಿದ್ಯುತ್ ಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸುವಲ್ಲಿ ಯಶಸ್ವಿಯಾಗಿದೆ. ಇದು ಇಷ್ಟಕ್ಕೇ ನಿಂತರೆ ಸಾಲದು. ಎಲ್ಲ ಕಡೆ ವಿಸ್ತರಿಸಬೇಕು. ಸೌರಶಕ್ತಿಯ ಗರಿಷ್ಠ ಬಳಕೆಗೆ ಹೆಚ್ಚಿನ ಆಸ್ಥೆ ವಹಿಸಬೇಕು. ಜನಸಾಮಾನ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮನೆ, ಕಟ್ಟಡಗಳ ಮೇಲೆ ಸೌರವಿದ್ಯುತ್ ಫಲಕ ಅಳವಡಿಸಿಕೊಳ್ಳುವಂತೆ ಅವರನ್ನು ಹುರಿದುಂಬಿಸಬೇಕು.
-ಬಸವರಾಜ ಹುಡೇದಗಡ್ಡಿ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.