‘ಸೋಂಕು ನಿವಾರಕವೋ? ರೋಗಕಾರಕವೋ?’ ಎಂಬ ಲೇಖನ (ಪ್ರ.ವಾ., ಜುಲೈ 21) ಉತ್ತರಗಳಿಗಿಂತ ಪ್ರಶ್ನೆ
ಗಳನ್ನೇ ಹೆಚ್ಚು ಹುಟ್ಟುಹಾಕಿದೆ. ಈಗಂತೂ ಮಳೆ ಬಂದು ವಾತಾವರಣ ತೊಳೆದಿಟ್ಟಂತಾಗಿದೆ. ಅದನ್ನೆಲ್ಲ ಕ್ರಿಮಿನಾಶಕ ಸಿಂಪಡಿಸುವ ಯಂತ್ರವು ಸೋಡಿಯಂ ಹೈಪೊಕ್ಲೋರೈಟ್ ದ್ರಾವಣ ಸಿಂಪಡಿಸುತ್ತ ಗಾಳಿಯನ್ನು ಹೊಲಸು ಮಾಡುತ್ತ ಹೋಗುತ್ತಿದೆ. ಕೊರೊನಾ ವೈರಸ್ ಗಾಳಿಯಲ್ಲಿ ಹಾರಾಡುವುದಿಲ್ಲ ಎಂದು ಹೇಳಲಾಗುತ್ತದೆ ಮತ್ತು ಕ್ರಿಮಿನಾಶಕಗಳು ನೇರವಾಗಿ ಕ್ರಿಮಿಯ ಮೇಲೆ ಬಿದ್ದರೆ ಮಾತ್ರ ಪರಿಣಾಮ ಬೀರುತ್ತವೆ. ಆದರೆ ಯಾವುದೇ ಸಂಖ್ಯಾಶಾಸ್ತ್ರೀಯ ಡೇಟಾ ಇಲ್ಲದೆಎಲ್ಲೆಲ್ಲಿಯೂ ಅಂದಾಜಿನ ಮೇಲೆ ಈ ದ್ರಾವಣವನ್ನು ಸಿಂಪಡಿಸುವುದರಿಂದ ವಾಯುಮಾಲಿನ್ಯ ಆಗುವುದಿಲ್ಲವೇ?
ಸೋಡಿಯಂ ಹೈಪೊಕ್ಲೋರೈಟ್ ಸುರಕ್ಷಿತ ಪರಿಸರಕ್ಕೆ ಯಾವುದೇ ಹಾನಿ ಉಂಟು ಮಾಡದು ಎಂದು ಹೇಳಲಾಗು
ತ್ತಿದೆ. ಆದರೆ ನಿಸರ್ಗದಲ್ಲಿ ಸ್ವಾಭಾವಿಕವಲ್ಲದ ಯಾವುದೇ ವಸ್ತುವನ್ನು ಮನುಷ್ಯ ಕೃತಕವಾಗಿ ಸೇರಿಸುವುದೇ ಮಾಲಿನ್ಯ. ಉದಾಹರಣೆಗೆ, ಹಾಲು ಅಮೃತ. ಆದರೆ ಡೈರಿಯಲ್ಲಿ ಉಳಿದ ಹಾಲನ್ನು ಮೋರಿಗೆ ಚೆಲ್ಲಿದರೆ ಅದು ಮಾಲಿನ್ಯ. ಮಾಲಿನ್ಯ ನೇರವಾಗಿ ಕಣ್ಣಿಗೆ ಕಾಣುವುದಿಲ್ಲ. ಅದರ ಪರಿಣಾಮ ದಶಕಗಳ ನಂತರವೇ ಗೋಚರಿಸುತ್ತದೆ. ಬೋನಿನಲ್ಲಿ ಸಿಕ್ಕ ಹುಲಿ ಅಲ್ಲಿಂದ ತಪ್ಪಿಸಿಕೊಳ್ಳಲು ಬೋನನ್ನು ಕಡಿಯುವುದು, ಚೀರುವುದು, ಪರಚುವುದು ಮಾಡಿ ಮೈಯೆಲ್ಲ ರಕ್ತಸಿಕ್ತ ಮಾಡಿಕೊಂಡಿರುತ್ತದೆ. ಹಾಗೆಯೇ ಕೊರೊನಾ ಎಂಬ ಪಂಜರದಲ್ಲಿ ಸಿಕ್ಕಿಹಾಕಿಕೊಂಡಂತಿರುವ ಮನುಷ್ಯ ಸಹ ಈಗ ಹೀಗೆಯೇ ವರ್ತಿಸುತ್ತಿದ್ದಾನೆ.
-ಪ್ರೊ. ಶಶಿಧರ್ ಪಾಟೀಲ್,ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.